ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಬಯಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಯಾವುದೇ ಒಬ್ಬ ಶಾಸಕ ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ನಾನು ಬಂಗಲೆಯಿಂದ (ಸಿಎಂ ಅಧಿಕೃತ ನಿವಾಸ) ಖಾಸಗಿ ನಿವಾಸ ‘ಮಾತೋಶ್ರೀ’ಗೆ ನನ್ನೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಿದ್ಧ ಎಂದರು.
ಫೇಸ್ಬುಕ್ ಮೂಲಕ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಠಾಕ್ರೆ, ‘ನನ್ನ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ.
ಶಿವಸೇನೆ ಎಂದಿಗೂ ಹಿಂದುತ್ವವನ್ನ ಬಿಡುವುದಿಲ್ಲ. ಶಿವಸೇನೆಯ ಪ್ರತಿ ಹೃದಯ ಬಡಿತ ಹಿಂದುತ್ವಕ್ಕೆ ಸೀಮಿತವಾಗಿದೆ. ಶಿವಸೇನೆಯ ಕೆಲ ಶಾಸಕರು ಎಲ್ಲಿ ಹೋಗಿದ್ದಾರೆ ಅದು ನನಗೆ ಬೇಕಿಲ್ಲ ಎಂದರು.
ನನ್ನ ಸ್ವಂತ ಜನರಿಗೆ (ಶಾಸಕರು) ನಾನು ಬೇಡವಾದಾಗ ನಾನೇನು ಹೇಳಬಲ್ಲೆ?, ಅವರಿಗೆ ನನ್ನ ವಿರುದ್ಧ ಏನಾದರು ಇದ್ದರೆ ಸೂರತ್ನಲ್ಲಿ ಇದನ್ನೆಲ್ಲ ಹೇಳುವ ಅಗತ್ಯವೇನಿತ್ತು?. ಇಲ್ಲಿಗೆ ಬಂದು ನನ್ನ ಮುಖ ನೋಡಿ ಹೇಳಬಹುದಿತ್ತಲ್ಲವೇ? ಎಂದು ಉದ್ಧವ್ ಠಾಕ್ರೆ ಬೇಸರ ವ್ಯಕ್ತಪಡಿಸಿದರು.