ಹೊಸದಿಗಂತ ವರದಿ,ಹಲಗೂರು:
ಸುಮಾರು ಎರಡು ಮೂರು ದಿನಗಳಿಂದ ದಿನನಿತ್ಯ ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಬರುವ ಕಾಡಾನೆಗಳ ಗುಂಪು ರೈತರು ಬೆಳೆದ ಫಸಲನ್ನು ತುಳಿದು ತಿಂದು ನಾಶಪಡಿಸುವುದು ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಗುರುವಾರ ತಡರಾತ್ರಿಲಿಂಗಪಟ್ಟಣ ಗ್ರಾಮದ ಹೊಲಗದ್ದೆಗಳಿಗೆ ಲಗ್ಗೆಯಿಟ್ಟ
ಕಾಡಾನೆಗಳ ದಾಳಿಯಿಂದಾಗಿ ತೆಂಗಿನ ಗಿಡಗಳು, ರಾಗಿ ಫಸಲು ನಾಶವಾಗಿರುವ ಘಟನೆ ಸಮೀಪ ನಡೆದಿರುತ್ತದೆ.
ಗ್ರಾಮದ ರೈತ ಲಿಂಗೇಗೌಡ ತಮ್ಮ ಒಂದು ಎಕರೆ ಜಮೀನಿನಲ್ಲಿ ರಾಗಿ ಬೇಸಾಯ ಮಾಡಿದ್ದರು. ಭೀಮನಕಿಂಡಿ ಅರಣ್ಯ ವಲಯದಿಂದ ತಡರಾತ್ರಿ ಆಗಮಿಸಿದ ಕಾಡಾನೆಗಳು ರಾಗಿ ತೆನೆಗಳನ್ನು ತಿಂದು, ಫಸಲನ್ನು ತುಳಿದು ಸಂಪೂರ್ಣ ಹಾಳು ಮಾಡಿವೆ.
ರೈತ ಪ್ರಸನ್ನ ರಾಜೇ ಅರಸು ಅವರಿಗೆ ಸೇರಿದ ಇಪ್ಪತ್ತು ತೆಂಗಿನ ಗಿಡಗಳು ಮತ್ತು ಪುಟ್ಟಸ್ವಾಮಿಯವರ ಆರು ತೆಂಗಿನ ಗಿಡಗಳ ಸುಳಿಯನ್ನು ತಿಂದು ಹಾಕಿವೆ. ಘಟನೆಯಿಂದ ಮಕ್ಕಳಂತೆ ಬೆಳೆಸಿದ್ದ ಗಿಡಗಳು ನಾಶವಾಗಿವೆ ಎಂದು ರೈತರು ಕಣ್ಣೀರು ಹಾಕಿದರು.
ಕಾಡು ಪ್ರಾಣಿಗಳ ದಾಳಿಯಿಂದಾಗಿ ಕಷ್ಟ ಪಟ್ಟು ಶ್ರಮ ವಹಿಸಿ ಬೆಳೆದ ಫಸಲು ನಾಶವಾಗುತ್ತಿದೆ. ರೈತರು ವ್ಯವಸಾಯ ಮಾಡಲು ಬಹಳ ಕಷ್ಟಪಡಬೇಕಾಗಿದೆ. ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.