ಕೆಂಪಣ್ಣ ಆರೋಪಗಳಿಗೆ ಡೈರೆಕ್ಟರ್‌, ಪ್ರೊಡ್ಯೂಸರ್‌ ಯಾರೆಂಬ ವಿವರ ಸದ್ಯದಲ್ಲೇ ಹೊರಬೀಳಲಿದೆ: ಸಿ.ಟಿ. ರವಿ

ಹೊಸದಿಗಂತ ವರದಿ, ಬೆಂಗಳೂರು:
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸಿನಿಮಾದ ನಿರ್ದೇಶಕ, ನಿರ್ಮಾಪಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅವರ ಆರೋಪಗಳು ಟೂಲ್ ಕಿಟ್‍ನ ಮತ್ತೊಂದು ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಗುರುವಾರ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಮಾಡಲಾಗುತ್ತಿದೆ. ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣಗೆ ಯಾರು, ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ ಎಂದು ಹೇಳಿದರು.
ಯಾವುದೇ ವಿಚಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಒಂದು ಮೂಲಭೂತ ಪ್ರಕರಣ ಇರಬೇಕು. ಒಂದು ನಿರ್ದಿಷ್ಟ ವಿಚಾರವೂ ಇರಬೇಕು. ಕೆಂಪಣ್ಣ ಆರೋಪದ ಹಿಂದಿನ ನಿರ್ದೇಶಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ಅವರು ಲೇವಡಿ ಮಾಡಿದರು.

ಶಿಕ್ಷಣ ಇಲಾಖೆ ಮದರಸಾ ಬಗ್ಗೆ ಗಮನ ಹರಿಸುವುದರಲ್ಲಿ ತಪ್ಪೇನಿದೆ?
ಮದರಸಾ ಶಿಕ್ಷಣದ ಬಗ್ಗೆ ಮಾಹಿತಿ ಕೇಳುವ ವಿಚಾರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಹಿತಿ ಕೇಳುವುದರಲ್ಲಿ ತಪ್ಪೇನಿದೆ? ಮದರಸಾ ಶಿಕ್ಷಣ ಪಡೆದ ತಾಲಿಬಾನ್ ಏನಾಗಿದೆ? ಶಿಕ್ಷಣ ಇಲಾಖೆ ಮದರಸಾ ಬಗ್ಗೆ ಗಮನ ನೀಡುವುದರಲ್ಲಿ ಏನು ತಪ್ಪಿದೆ? ಎಂದು ಮರು ಪ್ರಶ್ನೆ ಹಾಕಿದರು.
ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡುವುದರಲ್ಲಿ ಏನು ತಪ್ಪಿದೆ? ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಮಾಡಬಾರದು? ಹಬ್ಬ ಮಾಡುವವರು ಯಾರೂ ಬಾಂಬ್ ಹಾಕುವುದಿಲ್ಲ ಅಲ್ಲವೇ? ಎಂದು ಪತ್ರಕರ್ತರ ಪ್ರಶ್ನೆಗಳಿಗೆ, ಪ್ರಶ್ನೆಗಳ ಮೂಲಕವೇ ಉತ್ತರಿಸಿದರು. ಹಬ್ಬ ಮಾಡುವವರು ಹೆಚ್ಚೆಂದರೆ ಗಣಪತಿ ಬಪ್ಪ ಮೊರೆಯಾ ಎಂದು ಕೂಗಬಹುದು. ಅಷ್ಟು ಗ್ಯಾರಂಟಿ ನಾನು ಕೊಡಬಲ್ಲೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!