ಹೊಸದಿಗಂತ ವರದಿ, ಮಂಗಳೂರು :
ಆಟವಾಡುತ್ತಿದ್ದ ಮಗುವಿನ ಮೇಲೆ ಆವರಣ ಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕುಂಜತ್ತೂರು ಬಳಿ ನಡೆದಿದೆ.
ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಕುಂಜತ್ತೂರು ಸನ್ನಡ್ಕದಲ್ಲಿ ವಾಸವಾಗಿರುವ ಅನ್ಯರಾಜ್ಯ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ ಮಹಮ್ಮದ್ ಅಮೀನ್ ಎಂಬವರ ಎರಡೂವರೆ ವರ್ಷದ ಪುತ್ರ ಶೆರ್ಶಾಝ್ ಶಾ ಗಂಭೀರ ಗಾಯಗೊಂಡ ಬಾಲಕನಾಗಿದ್ದಾನೆ.
ಸಮೀಪ ವಾಸವಾಗಿರುವ ಖಾದರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾರ್ಡ್ ಸದಸ್ಯ ಹಾಗೂ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.