ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಗೆ ಆರೈಕೆ ಮಾಡೋದಕ್ಕೆ ತುಂಬಾ ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ 50 ದಿನದ ಕಂದಮ್ಮನನ್ನು ಕುಟುಂಬದವರೆಲ್ಲ ಸೇರಿ ಬಾವಿಗೆ ಎಸೆದು ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ವಡಗಾಂವ್ ಗ್ರಾಮದಲ್ಲಿ ನಡೆದಿದೆ.
ಪತ್ನಿ ವಾಣಿಶ್ರೀ ಹೆರಿಗೆಯ ನಂತರ ಬಾಣಂತನಕ್ಕೆಂದು ತವರು ಮನೆಗೆ ಬಂದಾಗ ಮಾವ ಬಸವರಾಜ್, ಅತ್ತೆ ರತ್ನಮ್ಮಾ, ಸಹೋದರ ಸಂತೋಷ್ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ವಾಣಿ ಪತಿ ಸಂಜು ಗಂಭೀರವಾಗಿ ಆರೋಪಿಸಿದ್ದಾರೆ.
ಮಗುವನ್ನು ದೇವರೇ ತೆಗೆದುಕೊಂಡು ಹೋಗಿದ್ದಾನೆ!
ಮಹಾರಾಷ್ಟ್ರದ ದೇಗೂಲೂರ ತಾಲೂಕಿನ ಕವಳಗಡ್ಡ ಸಂಜು ಜತೆ ವಾಣಿಶ್ರೀ ವಿವಾಹವಾಗಿದ್ದರು. ತೆಲಂಗಾಣದ ನಿಜಮಾಬಾದ್ನಲ್ಲಿ ಇಬ್ಬರು ವಾಸಿಸುತ್ತಿದ್ದರು. ಹೆರಿಗೆ ಹಾಗೂ ಬಾಣಂತನಕ್ಕೆ ವಾಣಿಶ್ರೀ ತವರು ಮನೆಗೆ ಹೋಗಿದ್ದರು. ಐವತ್ತು ದಿನದ ನಂತರ ಕೂಸನ್ನು ನೋಡಿಕೊಳ್ಳೋದು ಅವರಿಗೆ ಕಷ್ಟವಾಗಿತ್ತು ಎನ್ನಲಾಗಿದೆ. ರಾತ್ರಿ ನಾನು ಬಾತ್ರೂಮ್ಗೆ ಹೋಗಿ ಬರುವುದರಲ್ಲಿ ಮಗು ಕಾಣಿಸುತ್ತಿಲ್ಲ. ಮಗುವನ್ನು ದೇವರು ತೆಗೆದುಕೊಂಡು ಹೋಗಿದ್ದಾನೆ ಎಂದು ಪತ್ನಿ ಅಳುತ್ತಾ ಕಥೆ ಹೇಳಿದ್ದಾರೆ.
ಇದನ್ನು ನಂಬಲು ಸಾಧ್ಯವೇ?
ಮಗುವಿನ ತಂದೆ ಇನ್ನೂ ಹೆಸರಿಡದ ಕಂದನಿಗೆ ಪ್ರೀತಿಯಿಂದ ಓಂಕಾರ ಎಂದು ಕೂಗುತ್ತಿದ್ದರು. ಮಗುವನ್ನು ಇದ್ದಕ್ಕಿದ್ದಂತೆಯೇ ದೇವರು ಬಂದು ತೆಗೆದುಕೊಂಡು ಹೋದ ಎಂದರೆ ಏನರ್ಥ? ಇದರಿಂದ ಅನುಮಾನಗೊಂಡ ಸಂಜು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಪತ್ನಿ ಹಾಗೂ ಆಕೆಯ ಕುಟುಂಬ ಮಗುವನ್ನು ಕೊಲೆ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ. ನಾಲ್ಕು ಜನರ ಮೂಢನಂಬಿಕೆಗೆ ಮಗುವನ್ನು ಬಲಿ ಕೊಟ್ಟಿದ್ದಾರಾ ತನಿಖೆ ನಡೆಸಿ ಎಂದು ಸಂಜು ಗೋಗರೆದಿದ್ದಾರೆ.
ತನಿಖೆ ವೇಳೆ ಸತ್ಯ ಬಯಲು
ಪೊಲೀಸರು ವಾಣಿಶ್ರೀ ಮನೆಗೆ ಹೋಗಿ ತನಿಖೆ ಮಾಡಿದಾಗ ಆರೋಪಿಗಳು ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ನಮಗೆ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡಲು ಆಗಿಲ್ಲ ಹೀಗಾಗಿ ರಾತ್ರಿ ಮಗುವನ್ನು ಬಾವಿಗೆ ಎಸೆದಿದ್ದೇವೆ ಎಂದಿದ್ದಾರೆ.ಸದ್ಯ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.



