ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ವರ್ಷಗಳ ಎಂಎಸ್ಪಿ ಆಫರ್ (5-year MSP Contract Offer) ಸಂಬಂಧ ಸರ್ಕಾರ ಮತ್ತು ಪ್ರತಿಭಟನಾ ರೈತರ ನಡುವೆ ಭಾನುವಾರ ರಾತ್ರಿ ನಾಲ್ಕನೇ ಸುತ್ತಿನ ಮಾತುಕತೆ ಬಳಿಕ ಇದೀಗ ರೈತ ಸಂಘಗಳ ಒಕ್ಕೂಟ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ಹಳೆಯ MSP ನಲ್ಲಿ ಮೂರು ವಿಧದ ಬೇಳೆಕಾಳುಗಳು, ಜೋಳ ಮತ್ತು ಹತ್ತಿಯನ್ನು ಖರೀದಿಸಲು ಕೇಂದ್ರ ಸರ್ಕಾರದ ಐದು ವರ್ಷಗಳ ಒಪ್ಪಂದ ಪ್ರಸ್ತಾಪವನ್ನು ತಿರಸ್ಕರಿಸಿದೆ.
ಸೋಮವಾರ ಸಂಜೆ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತರ ಬೇಡಿಕೆಗಳನ್ನು ದಿಕ್ಕು ತಪ್ಪಿಸುವವು ಎಂದು ಹೇಳಿ ಎಸ್ಕೆಎಂ ಟೀಕಿಸಿತು.
ಭಾನುವಾರ ತಡರಾತ್ರಿ ರೈತ ಮುಖಂಡರೊಂದಿಗಿನ ಸಭೆಯಿಂದ ನಿರ್ಗಮಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರೊಂದಿಗೆ ಮೂವರು ಕೇಂದ್ರ ಸಚಿವರ ಸಮಿತಿಯು ಐದು ವರ್ಷಗಳ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಹೇಳಿದರು. ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವುದು ಇದರಲ್ಲಿ ಸೇರಿದೆ.
ಆದ್ರೆ ಸೋಮವಾರ ಸಂಜೆ ಎಸ್ಕೆಎಂ ಕೇಂದ್ರ ಸ್ರರ್ಕಾರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ ಎಂದು ಹೇಳಿದೆ. ರೈತರ ಮೂಲಭೂತ ಬೇಡಿಕೆಗಳನ್ನು ಬೇರೆಡೆಗೆ ತಿರುಗಿಸುವುದು ಈ ಆಫರ್ ಹಿಂದಿರುವ ಉದ್ದೇಶವಾಗಿದೆ ಎಂದು ಟೀಕಿಸಿದೆ. ಎಲ್ಲಾ ಬೆಳೆಗಳನ್ನು ಖರೀದಿಗೆ ಖಾತರಿಪಡಿಸಿದ ಸಂಗ್ರಹಣೆ ಗಿಂತ ಕಡಿಮೆಯಿಲ್ಲದೇ ಖರೀದಿಸಬೇಕು. 2014ರ ಪ್ರಣಾಳಿಕೆಯಲ್ಲಿ ತಿಳಿಸಲಾದ ಬೇಡಿಕೆಯನ್ನು ಈಡೇರಿಸಬೇಕು ಎಂದು ಒಕ್ಕೂಟವು ಹೇಳಿದೆ.
ಈ ಖರೀದಿಯು ಸ್ವಾಮಿನಾಥನ್ ಆಯೋಗದ C2+50% MSP ಸೂತ್ರವನ್ನು ಆಧರಿಸಿರಬೇಕು ಮತ್ತು ಅಸ್ತಿತ್ವದಲ್ಲಿರುವ A2+FL+50% ವಿಧಾನಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಎಸ್ಕಿಎಂ ಒಕ್ಕೂಟವು ಹೇಳಿದೆ. ಇದುವರೆಗೆ ನಡೆದ ಮಾತುಕತೆಯ ಸಂಬಂಧ ಕೇಂದ್ರ ಸರ್ಕಾರವು ಪಾರದರ್ಶಕತೆಯನ್ನು ಪ್ರದರ್ಶಿಸಿಲ್ಲ ಎಂದು ರೈತ ಒಕ್ಕೂಟವು ಟೀಕಿಸಿದೆ.