ಕೈಗೆ ಸಿಕ್ಕ ಅಪ್ಪ ಮತ್ತೆ ನಾಪತ್ತೆ

ಹೊಸದಿಗಂತ ವರದಿ, ಶಿವಮೊಗ್ಗ:

ನಾಪತ್ತೆ ಆಗಿದ್ದ ತಂದೆ ಸಿಕ್ಕರೆಂದು ಊರಿಗೆ ಕರೆದುಕೊಂಡು ಹೋಗುತ್ತಿರುವಾಗ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪುನಃ ಕಾಣೆಯಾಗಿರುವ ಘಟನೆ ನಡೆದಿದೆ.

ಶಿಕಾರಿಪುರ ತಾಲೂಕು ಚಿಕ್ಕಜೋಗಿಹಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿರುವ ಬಸವರಾಜ ಅವರ ತಂದೆ ಮತ್ತು ತಾಯಿ ಭದ್ರಾವತಿಯ ಜನ್ನಾಪುರದಲ್ಲಿ ವಾಸವಾಗಿದ್ದರು. ಇವರ ತಂದೆ ಗಂಗಪ್ಪ ಹತ್ತಿ ಮದ್ಯಪಾನ ಮಾಡುತ್ತಿದ್ದು, ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಿದ್ದರು. ನಾಲ್ಕೈದು ಬಾರಿ ಮನೆ ಬಿಟ್ಟು ಕೂಡ ಹೋಗಿದ್ದರು. ಒಂದು ವಾರ ಬಿಟ್ಟು ವಾಪಾಸಾಗಿದ್ದರು. ಸರಿಯಾಗಿ ಮಾತನಾಡಲೂ ಅವರಿಗೆ ಬರುತ್ತಿರಲಿಲ್ಲ.
ಡಿಸೆಂಬರ್ 06 ರಂದು ಕೂಡ ಗಂಗಪ್ಪ ಮನೆಯಿಂದ ಹೋದವರು ವಾಪಾಸ್ ಬಂದಿರಲಿಲ್ಲ. ಎಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಡಿಸೆಂಬರ್ 09 ರಂದು ಬಸವರಾಜ ಅವರ ದೊಡ್ಡಪ್ಪ ಕರೆ ಮಾಡಿ, ನಿಮ್ಮ ತಂದೆ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದ್ದರು. ತಂದೆ ಕರೆತರಲು ಬಸವರಾಜ ಹಾವೇರಿಗೆ ತೆರಳಿದ್ದರು.

ಹಾವೇರಿಯಿಂದ ಭದ್ರಾವತಿಗೆ ಕರೆದುಕೊಂಡು ಬರುತ್ತಿರುವಾಗ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ತಂದೆಯನ್ನು ಬಸ್‌ನಲ್ಲಿ ಕೂರಿಸಿ ಶೌಚಾಲಯಕ್ಕೆ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುವಷ್ಟರಲ್ಲಿ ಗಂಗಪ್ಪ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ ಮಗ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!