ಹೊಸದಿಗಂತ ವರದಿ, ಮಡಿಕೇರಿ
ದಕ್ಷಿಣ ಕೊಡಗಿನ ವಿ.ಬಾಡಗ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಹುಲಿ ದಾಳಿಗೆ ಬಲಿಯಾದ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು 5.50 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.
ದಕ್ಷಿಣ ಕೊಡಗಿನ ವಿ.ಬಾಡಗ ಗ್ರಾಮದ ಒಂದನೇ ರುದ್ರಗುಪ್ಪೆ ಗ್ರಾಮದ ತೋಟವೊಂದರಲ್ಲಿ ಕಾಳುಮೆಣಸು ಕೊಯ್ಯಲು ತೆರಳಿದ್ದ ಗದ್ದೆಮನೆ ನಿವಾಸಿ ಗಣೇಶ್(ಪುಟ್ಟು-29) ಅವರು ಹುಲಿ ದಾಳಿಗೆ ಬಲಿಯಾಗಿದ್ದರು.
ಶುಕ್ರವಾರ ಅತ್ತೂರು ಬಳಿಯ ಅವರ ನಿವಾಸಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಮೃತರ ಕುಟುಂಬದವರಿಗೆ 5.50ಲಕ್ಷ ರೂ.ಗಳ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟ ಕಾರ್ಯಪಡೆಯ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಮತ್ತಿತರರು ಹಾಜರಿದ್ದರು.
ಬಳಿಕ ಅರಣ್ಯ ಸಚಿವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸರಹದ್ದಿನ ಸುಳುಗೋಡುವಿಗೆ ತೆರಳಿ ಆನೆ ಹಾವಳಿ ತಡೆಗೆ ರೈಲ್ವೇ ಕಂಬಿಯಿಂದ ನಿರ್ಮಿಸಲಾದ ಬೇಲಿಯನ್ನು ಪರಿಶಿಲಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ