ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ :

ಈ ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಯಾವುದು ಅಸಾಧ್ಯವಲ್ಲ, ಎಲ್ಲವೂ ಸಾಧ್ಯ ಆತ್ಮವಿಶ್ವಾಸ ಇರಬೇಕು. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಜಿಲ್ಲೆಯ ಶಿಗ್ಗಾವ ತಾಲೂಕಿನ ಅಂದಲಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 150ನೇ ವರ್ಷ ಸಂಭ್ರಮದ ಪ್ರಯುಕ್ತ ಶತಮಾನೋತ್ತರ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದು ಸಂಸ್ಥೆಗೆ 150 ವರ್ಷ ಆಗುತ್ತಿದೆ ಎಂದರೆ ಅದು ಒಂದು ಇತಿಹಾಸ. ಒಬ್ಬ ಮನುಷ್ಯನಿಗೆ ನೂರು ವರ್ಷ ವಯಸ್ಸು ಆಗಬಹುದು. ಆದರೆ ಒಂದು ಸಂಸ್ಥೆ 150 ವರ್ಷವಾದರೆ ಇಲ್ಲಿ ಕಲಿತವರು ಯಾವ ಯಾವ ಸ್ಥಾನದಲ್ಲಿದ್ದಾರೆ ಅನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯ ಪೂರ್ವದ ಚಿತ್ರವನ್ನು ನಾವು ನೆನಪು ಮಾಡಿಕೊಂಡರೆ, ಆಗ ಶಾಲೆಗಳ ಸಂಖ್ಯೆ ಬಹಳ ವಿರಳ. ಹೀಗಾಗಿ ಅವತ್ತಿನ ನಮ್ಮ ಹಿರಿಯರು ಬಹಳ ದೂರದೃಷ್ಟಿ ಇಟ್ಟುಕೊಂಡು, ಪ್ರಗತಿಪರ ವಿಚಾರವನ್ನಿಟ್ಟುಕೊಂಡು ಈ ಶಾಲೆ ಪ್ರಾರಂಭ ಮಾಡಿದ್ದಾರೆ. ಈ ಶಾಲೆ ಪ್ರಾರಂಭ ಮಾಡಿದ ಹಿರಿಯರಿಗೆ, ಇಲ್ಲಿ ಬಂದು ವಿದ್ಯಾರ್ಜನೆ ಮಾಡಿದ ಶಿಕ್ಷಕರಿಗೆ, ಮೊದಲು ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ, ಶಾಲೆ ನಿರ್ಮಾಣ ಮಾಡಿದವರಿಗೆ, ಶಾಲೆಗೆ ಜಾಗ ದಾನ ಮಾಡಿದವರಿಗೆ ನನ್ನ ಕೃತಜ್ಞತೆ ಹೇಳಲು ಬಯಸುತ್ತೇನೆಂದು ಹೇಳಿದರು.

ನಾವು ನಮ್ಮ ಊರು, ಕಲಿತ ಶಾಲೆ, ವಿದ್ಯೆ ಕಲಿಸಿದ ಗುರುಗಳನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಬೇಕು. 150 ವರ್ಷ ಪೂರೈಸಿದ ಶಾಲೆಗೆ ನಾವು ಕೃತಜ್ಞತೆಯಿಂದ ಇರುವ ಭಾವನೆ ನಮಗೆ ಬರಬೇಕಿದೆ. ಅವತ್ತಿನ ಶಿಕ್ಷಣಕ್ಕೆ ಇವತ್ತಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸವಿದೆ. ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಿದೆ. ಖಾಸಗಿ ವಲಯದಲ್ಲಿ ಬಹಳಷ್ಟು ಮಹತ್ವವನ್ನು ಕೊಟ್ಟು ಹೆಚ್ಚಿನ ಶಾಲಾ ಕಾಲೇಜುಗಳನ್ನು ನಾವು ನೋಡಿತ್ತಿದ್ದೇವೆ. ಅದಕ್ಕಾಗಿ ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ತಾಲ್ಲೂಕುಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಸರಾಸರಿಗಿಂತ ಕಡಿಮೆ ಇರುವ 103 ತಾಲ್ಲೂಕಿಗೆ ಹೆಚ್ಚಿನ ಶಾಲಾ ಕೊಠಡಿಗಳನ್ನು ಕೊಡುತ್ತಿದ್ದೇವೆ. ರಾಜ್ಯದೆಲ್ಲೆಡೆ ಈ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ, ಅರೋಗ್ಯ, ಮಹಿಳಾ ಮತ್ತು ಕಲ್ಯಾಣ ಹಾಗೂ ಪೌಷ್ಟಿಕ ಆಹಾರದ ಅಂಶಗಳ ಮೇಲೆ ನಾನು ನನ್ನ ಬಜೆಟ್ ನಲ್ಲಿ ಹಣವನ್ನು ಒದಗಿಸಿದ್ದೇನೆ. ಜನಪ್ರಿಯತೆಗಾಗಿ ಬಜೆಟ್ ಮಾಡಬಾರದು. ಜನೋಪಯೋಗಿ ಬಜೆಟ್ ಮಾಡಬೇಕು ಎಂದರು.

ಸಾಮಾನ್ಯ ಜನರಿಗೆ, ರೈತರಿಗೆ, ಕೂಲಿಕಾರರನನ್ನು ಮೇಲೆತ್ತುವ ನಿಟ್ಟಿನಲ್ಲಿ ಅವರಿಗೆ ಹೇಗೆ ಶಿಕ್ಷಣ, ಆರೋಗ್ಯವನ್ನು ನೀಡುವ ಚಿಂತನೆಯಿಂದ ರಾಜ್ಯವನ್ನು ಕಟ್ಟಬೇಕಾಗಿದೆ. ಈ ದೂರದೃಷ್ಟಿಯನ್ನಿಟ್ಟುಕೊಂಡು ನಾನು ಮುಖ್ಯಮಂತ್ರಿಯಾಗಿ ಕೆಲಸವನ್ನು ಮಾಡುತ್ತಿದ್ದೇನೆ. ಶಿಕ್ಷಣದಲ್ಲಿ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತಿದೆ. ವಿದ್ಯಾರ್ಥಿಗಳಿಗೆ ವಸತಿ ಶಾಲೆ, ಶಿಕ್ಷಕರ ನೇಮಕಾತಿ ಮಾಡುತ್ತಿದ್ದೇವೆ. ಯುವಕರಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗ ನೀಡುತ್ತಿದ್ದೇವೆ. ಸರ್ಕಾರದ ಯೋಜನೆಗಳ ಲಾಭವನ್ನು ರಾಜ್ಯದ ಜನರು ಪಡೆಯಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!