ಮೇಕೆದಾಟು ಹೋರಾಟ: ಕಾಂಗ್ರೆಸ್ ನಾಯಕರ ಪಾದಯಾತ್ರೆ ಮಾರ್ಗ

ಹೊಸದಿಗಂತ ವರದಿ,ರಾಮನಗರ:

ರಾಜಕೀಯ ರಂಗು ಪಡೆಡೆದುಕೊಂಡಿರುವ ಮೇಕೆದಾಟು ಪಾದಯಾತ್ರೆ ಕೋವಿಡ್ ಕರಿ ನೆರಳಿನಲ್ಲಿ ಜನವರಿ 9ರ ಭಾನುವಾರ ಮೇಕೆದಾಟು ಬಳಿಯ ಸಂಗಮ ಸ್ಥಳದಿಂದ ಆರಂಭವಾಗಲಿದೆ.
ಬೆಳಗ್ಗೆ 8.30 ಕಾಂಗ್ರೆಸ್ ನಾಯಕರು ಪಾದಯಾತ್ರೆ ಪ್ರಾರಂಭಿಸಲಿದ್ದು, ಈಗಾಗಲೇ ಸಿದ್ಧತೆಗಳು ಬರದಿಂದ ಸಾಗಿವೆ. ಮೇಕೆದಾಟುವಿನಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದ ತನಕ ಪಾದಯಾತ್ರೆ ಸಾಗಲಿದ್ದು, ಮಾರ್ಗ ಹೀಗಿದೆ.
ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕರ್ಪ್ಯೂ ಘೋಷಣೆ ಮಾಡಿದೆ. ವಾರಾಂತ್ಯದ ಕರ್ಪ್ಯೂ ಜಾರಿಮಾಡುವ ಹೊಣೆ ಅಧಿಕಾರಿಗಳ ಹೆಗಲಿಗೇರಿದೆ. ಅದರೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕರ್ಪ್ಯೂ ದಿನದಂದೇ ಆರಂಭವಾಗುತ್ತಿದೆ.
ಎರಡು ರಾಷ್ಟ್ರೀಯ ಪಕ್ಷಗಳ ಜಂಗಿ ಕುಸ್ತಿಯ ಕೇಂದ್ರಬಿಂದು, ಇಡೀ ರಾಜ್ಯದ ಗಮನ ತನ್ನ ಸೆಳೆದಿರುವ ಕಾಂಗ್ರಸ ಮೇಕೆದಾಟು ಪಾದಯಾತ್ರೆ ಜನವರಿ 9 ರಂದು ಪ್ರಾರಂಭವಾಗಿ ಜನವರಿ 19ರ ತನಕ ನಡೆಯಲಿದೆ. ಸುಮಾರು 160 ಕಿ. ಮೀ. ಸಂಚಾರ ಮಾಡಿ ಅಂತಿಮವಾಗಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಪಾದಯಾತ್ರೆಯ ವಿವರ
* ಜನವರಿ 9ರ ಭಾನುವಾರ ಬೆಳಿಗ್ಗೆ 8.30ಕ್ಕೆ ಮೇಕೆದಾಟು ಬಳಿಯ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಧಿಸುವ ಸಂಗಮ ಸ್ಥಳದಿಂದ ಪ್ರಾರಂಭವಾಗುವ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ಸಾಗಿ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲೇ ರಾತ್ರಿ ವಾಸ್ತವ್ಯ.
* 2ನೇ ದಿನ ದೊಡ್ಡಾಲಹಳ್ಳಿ ಗ್ರಾಮದಿಂದ 8 ಕಿ. ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ. ಮೀ. ಸಾಗಿ ಕನಕಪುರ ತಾಲ್ಲೂಕು ಕೇಂದ್ರ ತಲುಪಲಿದೆ. ರಾತ್ರಿ ಕನಕಪುರದಲ್ಲಿ ನಾಯಕರ ವಾಸ್ತವ್ಯ.
* 3ನೇ ದಿನ ಕನಕಪುರದಿಂದ 7.3 ಕಿ. ಮೀ. ನೆಡದು ಗಾಣಳು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಬಳಿ ಊಟ ಹಾಗೂ ವಿಶ್ರಾಂತಿ. ನಂತರ ಮತ್ತೆ 7 ಕಿ. ಮೀ. ಸಾಗುವ ಪಾದಯಾತ್ರೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ.
* 4ನೇ ದಿನದ ಪಾದಯಾತ್ರೆ ಚುಕ್ಕೇನಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ 15 ಕಿ. ಮೀ. ಸಾಗಿ ಜಿಲ್ಲಾ ಕೇಂದ್ರ ರಾಮನಗರ ತಲುಪಲಿದೆ. ರಾತ್ರಿ ಅಲ್ಲಿಯೇ ಸಭೆ ನಡೆಸಿ, ನಾಯಕರು ವಾಸ್ತವ್ಯ ಹೂಡಲಿದ್ದಾರೆ.
* 5 ನೇ ದಿನದ ಪಾದಯಾತ್ರೆ ರಾಮನಗರದಿಂದ ಆರಂಭಗೊಂಡು 15 ಕಿ. ಮೀ. ಸಾಗಿ ಬಿಡದಿ ತಲುಪಲಿದೆ. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ.
* 6ನೇ ದಿನದ ಪಾದಯಾತ್ರೆ ಬಿಡದಿಯಿಂದ ಪ್ರಾರಂಭಗೊಂಡು ಮಂಚನಾಯಕನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ. ಮೀ. ಸಾಗಿ ಕೆಂಗೇರಿ ತಲುಪಲಿದೆ. ರಾತ್ರಿ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಲ್ಲಿ ವಾಸ್ತವ್ಯ.
* 7ನೇ ದಿನದ ಪಾದಯಾತ್ರೆ ಕೆಂಗೇರಿಯಿಂದ ಪ್ರಾರಂಭ, ಬೆಂಗಳೂರು ನಗರ ಪ್ರವೇಶ. 12 ಕಿ. ಮೀ. ನಡೆದು ಬೆಂಗಳೂರಿನ ಬನಶಂಕರಿಯಲ್ಲಿ ಮೂಲಕ ಸಾಗಿ ಸಾರಕ್ಕಿ ಸಿಗ್ನಲ್ ಬಳಿಯ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ವಾಸ್ತವ್ಯ.
* 8ನೇ ದಿನದ ಪಾದಯಾತ್ರೆ ಸಾರಕ್ಕಿಯಿಂದ ಪ್ರಾರಂಭ. ಕೋರಮಂಗಲ ಮಾರ್ಗವಾಗಿ ಸಾಗುವ ಪಾದಯಾತ್ರೆ 17.2 ಕಿ. ಮೀ. ಸಾಗಿ ರಾತ್ರಿ ಲಕ್ಷ್ಮಿಪುರಂ ಸುಬ್ರಹ್ಮಣ್ಯ ಛತ್ರದಲ್ಲಿ ವಾಸ್ತವ್ಯ.
* 9ನೇ ದಿನದ ಪಾದಯಾತ್ರೆ ಲಕ್ಷ್ಮಿಪುರಂನಿಂದ ಪ್ರಾರಂಭ. ಬಾಣಸವಾಡಿ ಮಾರ್ಗವಾಗಿ 12 ಕಿ. ಮೀ. ಸಾಗಿ ರಾತ್ರಿ ನಾಗವಾರದ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ.
* 10ನೇ ದಿನದ ಪಾದಯಾತ್ರೆ ನಾಗವಾರದಿಂದ ಪ್ರಾರಂಭವಾಗುವ ಕಾಂಗ್ರೆಸ್ ನಾಯಕರ ಪಾದಯಾತ್ರೆ 12 ಕಿ. ಮೀ. ಸಂಚಾರ ಮಾಡಿ ಗಾಯಿತ್ರಿ ವಿಹಾರ್, ಪ್ಯಾಲೇಸ್ ಗ್ರೌಂಡ್ ತಪುಪಲಿದೆ.
* ಪಾದಯಾತ್ರೆ ಕೊನೆಯ ದಿನವಾದ 11ನೇ ದಿನ ಪ್ಯಾಲೇಸ್ ಗ್ರೌಂಡ್‌ನಿಂದ ಹೊರಟು 8 ಕಿ. ಮೀ. ಸಂಚಾರ ಮಾಡಿ ರೇಸ್ ಕೋರ್ಸ್ ರೋಡ್ ಮೂಲಕ ಸಾಗಿ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮುಕ್ತಾಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!