ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆಯೋಜನೆ ಮಾಡಲಾಗಿದ್ದ ‘ನಮೋ ಭಾರತ್ ಕಾರ್ಯಕ್ರಮ’ ಆಯೋಜನೆಗೆ ರಾಜ್ಯ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿ ಆದೇಶ ಹೊರಡಿಸಿದೆ .
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷ ಆಡಳಿತ ಸಾಧನೆಗಳನ್ನು ಹಂಚಿಕೊಳ್ಳಲು ಆಗಮಿಸುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೂ ಅನುಮತಿ ಸಿಕ್ಕಂತಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆಯಬೇಕಿದ್ದ ನಮೋ ಭಾರತ್ ಕಾರ್ಯಕ್ರಮದ ಅನುಮತಿ ರದ್ದು ಮಾಡಲಾಗಿತ್ತು. ಜೊತೆಗೆ, ಚಿಂತಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜೊಲ್ಲೆಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಶ್ರೀಶಾನಂದ ಅವರು, ಈ ಕಾರ್ಯಕ್ರಮವನ್ನು ಪೊಲೀಸರು ನೀಡಿದ್ದ ನಿಯಮಾವಳಿಗೆ ಅನುಗುಣವಾಗಿ ಮಾಡಬೇಕು. ಜಿಲ್ಲಾ ಪ್ರವೇಶಾತಿಗೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿದರು.
ಈ ಮೂಲಕ ಪೊಲೀಸರು ಮತ್ತು ತಹಸಿಲ್ದಾರ್ ಹೇರಿದ್ದ ನಿರ್ಬಂಧವನ್ನು ವಜಾ ಮಾಡಿ, ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಈ ಮೂಲಕ ನಮೋ ಭಾರತ್ ಕಾರ್ಯಕ್ರಮಕ್ಕೆ ವಿಧಿಸಲಾಗಿದ್ದ ನಿರ್ಬಂಧ ತೆರವಾಗಿದೆ.