ಹೊಸ ದಿಗಂತ ವರದಿ, ಚಿಕ್ಕೋಡಿ:
ಹಿಜಾಬ್ ನಿಂದ ಹತ್ತಿಕೊಂದ ಬೆಂಕಿ ರಾಜ್ಯದಲ್ಲಿ ಕೇಸರಿ ಶಾಲು ಧಾರಣೆಯ ಪ್ರತ್ತ್ಯೂತ್ತರಕ್ಕೆ ತಿರುಗಿದ್ದು, ಸಾಕ್ಷಿ ಎಂಬಂತೆ ಶುಕ್ರವಾರ ಅಥಣಿ ಪಟ್ಟಣದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ಪಟ್ಟಣದ ಸರ್ಕಾರಿ ಪಿಯು ಕಾಲೆಜಿಗೆ ಗುರುವಾರ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದರು, ಆದರೆ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಅವಕಾಶ ನಿರಾಕರಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ಹೋಗಿದ್ದರು. ಆದರೆ ಇವತ್ತು ಅಥಣಿ ಪಟ್ಟಣ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬರಲು ಯತ್ನಿಸಿದ ಯುವಕರನ್ನು ಆಡಳಿತ ಮಂಡಳಿ ಕಾಲೇಜು ಗೇಟ್ ಕ್ಯಾಂಪಸ್ನಲ್ಲಿ ತಡೆಹಿಡಿದು ಶಾಲು ತಗೆಸಿ ಕ್ಲಾಸ್ ರೂಂಗೆ ಅವಕಾಶ ನೀಡಿದರು.
ಅಥಣಿಯ ಶ್ರಿ ಕೆಎ ಲೋಕಾಪುರ ಪದವಿ ಮಹಾವಿದ್ಯಾಲಯ ಕಾಲೇಜಿನ ಹತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬಂದಿರುವ ವಿಚಾರವಾಗಿ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದಾರೆ.