ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ‘ನಿಗೂಢ ರೋಗ’ ಗುಣಪಡಿಸಿಕೊಳ್ಳಲು ಪತ್ನಿಯನ್ನೇ ಬಲಿ ಕೊಟ್ಟ ಪತಿಗೆ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2020 ರಲ್ಲಿ ಪತ್ನಿಯನ್ನು ಕಡಿದು ಕೊಂದಿದ್ದ ಪಾಪಿಗೆ ಉತ್ತರ ಪ್ರದೇಶ ಸ್ಥಳೀಯ ನ್ಯಾಯಾಲಯ ಇಂದು ಶಿಕ್ಷೆ ವಿಧಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 25 ಸಾವಿರ ರೂ ದಂಡ ಕೂಡ ಹೇರಿದೆ.
ಉತ್ತರ ಪ್ರದೇಶದ ಕಮಲೇಶ್ ಎಂಬಾತನಿಗೆ ಫೈಲೇರಿಯಾಸಿಸ್ ಎಂಬ ನಿಗೂಢ ರೋಗವಿತ್ತು. ಇದಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಕಮಲೇಶ್ ದೇವರ ಮೊರೆ ಹೋಗಿದ್ದ. ಈ ವೇಳೆ ಈತನ ಗುರುಗಳು ಬಲಿ ಕೊಟ್ಟರೆ ರೋಗ ಗುಣವಾಗುತ್ತದೆ ಎಂದು ಸಲಹೆ ನೀಡಿದ್ದರು.ಅದರಂತೆ ಕಮಲೇಶ್ ಆರಂಭದಲ್ಲಿ ಒಂದರ ಬಳಿಕ ಒಂದರಂತೆ ಮೂರು ಹಂದಿಗಳನ್ನು ಕಡಿದು ದೇವರಿಗೆ ಅರ್ಪಣೆ ಮಾಡಿದ್ದ. ಆದರೆ ಈತನ ರೋಗ ಮಾತ್ರ ವಾಸಿಯಾಗಿರಲಿಲ್ಲ. ಇದರಿಂದ ಚಿಂತಾಕ್ರಾಂತನಾದ ಕಮಲೇಶ್ ಮತ್ತೆ ಗುರುಗಳ ಮೊರೆ ಹೋದ..
ಈ ವೇಳೆ ಗುರುಗಳು ಕಠಿಣ ಬಲಿಗೆ ಸೂಚಿಸಿದ್ದಾರೆ ಎಂದು ತನ್ನ ಹೆಂಡತಿಯನ್ನೇ ಕಡಿದುಕೊಂದು ಹಾಕಿದ್ದ. ಬಳಿಕ ಈ ವಿಚಾರ ಬಯಲಾಗಿದ್ದು, ಡಿಸೆಂಬರ್ 11, 2020 ರಂದು ಸಂತ್ರಸ್ಥೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕಮಲೇಶ್ ಕೃತ್ಯ ಬಯಲಾಗಿದೆ. ತನ್ನ ಅನಾರೋಗ್ಯ ಗುಣಪಡಿಸಲು ತನ್ನ ಪತ್ನಿಯನ್ನೇ ಬಲಿ ನೀಡಿದ್ದ ವಿಚಾರ ಪೊಲೀಸರಿಗೆ ಆಘಾತ ತರಿಸಿತ್ತು. ಬಳಿಕ ಕಮಲೇಶ್ ನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸುದೀರ್ಘ ವಿಚಾರಣೆ ಬಳಿಕ ಕಮಲೇಶ್ ಅಪರಾಧಿ ಎಂದು ಪರಿಗಣಿಸಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಚ್ಚೆ ಲಾಲ್ ಸರೋಜ್ ಅವರು ಸೋಮವಾರ ಅಪರಾಧಿ ಕಮಲೇಶ್ಗೆ 25,000 ರೂ. ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.