ಹೊಸ ದಿಗಂತ ಡಿಜಿಟಲ್ ಡೆಸ್ಕ್
ಹೇಗೆ 32 ವರ್ಷಗಳ ನಂತರ ‘ದ ಕಾಶ್ಮೀರ್ ಫೈಲ್ಸ್’ ಚಿತ್ರವು ಹಿಂದುಗಳ ನೋವಿಗೆ ಅಭಿವ್ಯಕ್ತಿ ಕೊಟ್ಟು ನ್ಯಾಯದತ್ತ ಹೆಜ್ಜೆ ಇರಿಸಿತೋ ಅದೇ ರೀತಿ ಮೋದಿ ಸರ್ಕಾರ ಬಂದ ನಂತರ 30 ವರ್ಷಗಳ ನೋವನ್ನು ಅಳಿಸಿ ನ್ಯಾಯ ಕೊಡಿಸುವ ಕೆಲವು ಪ್ರಯತ್ನಗಳಾದವು.
ಅವುಗಳಲ್ಲೊಂದು ಉಗ್ರ ಯಾಸಿನ್ ಮಲಿಕ್ ಕುರಿತಾದದ್ದು. ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಅತ್ಯಾಚಾರ-ಹಿಂಸೆಗಳ ಹಿಂದೆ ಯಾಸಿನ್ ಮಲಿಕ್ ಇದ್ದಿದ್ದು ಬಹಿರಂಗ ಸತ್ಯದಂತಿದ್ದರೆ, ಗಂಭೀರ ವಿಷಯವೇನೆಂದರೆ, ಈತ ಕಾಶ್ಮೀರದಲ್ಲಿ ವಾಯುಸೇನೆ ಅಧಿಕಾರಿಗಳನ್ನು ಹತ್ಯೆಗೈದ ಆರೋಪವನ್ನು ಹೊತ್ತಿರುವವ.
ಆದರೆ ದುರಂತವೇನು ಗೊತ್ತಾ?
ಇಂಥ ಪ್ರತ್ಯೇಕತಾವಾದಿ ಹಾಗೂ ಶಂಕಿತ ಉಗ್ರ ಹಿನ್ನೆಲೆ ಹೊಂದಿರುವವನನ್ನು ಈ ಹಿಂದಿನ ಸರ್ಕಾರಗಳು ಮತ್ತು ಮಾಧ್ಯಮದ ಒಂದು ವರ್ಗ ಇನ್ನಿಲ್ಲದಂತೆ ರಮಿಸಿತ್ತು ಎಂಬುದು.
ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ ಸಿಂಗ್ ಫೆಬ್ರವರಿ 6, 2006ರಲ್ಲಿ ಈತನನ್ನು ಭೇಟಿಯಾಗಿ ಉಡುಗೊರೆಯನ್ನೂ ಸ್ವೀಕರಿಸಿದ್ದರು.
2008ರಲ್ಲಿ ಇಂಡಿಯಾ ಟುಡೆ ಸಮೂಹ ಈತನನ್ನು ತನ್ನ ಶೃಂಗಸಭೆಗೆ ಆಹ್ವಾನಿಸಿದ್ದಲ್ಲದೇ ಯೂಥ್ ಐಕಾನ್ ಎಂಬ ಬಿರುದನ್ನೂ ನೀಡಿತು. ಎನ್ಡಿಟಿವಿಯ ರವೀಶ್ ಕುಮಾರ್ ತಮ್ಮ ಚರ್ಚೆಗಳಲ್ಲಿ ಈತನನ್ನು ಯಾಸಿನ್ ಸಾಬ್ ಎಂದೆಲ್ಲ ಕರೆದಿದ್ದಾಯಿತು.
ಇದೇ ಯಾಸಿನ್ ಮಲಿಕ್, ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಐ ಎ ಎಫ್ ಅಧಿಕಾರಿಗಳನ್ನು ಕೊಂದಿದ್ದು ತನ್ನ ಸಂಘಟನೆಯೇ ಎಂದು ನೇರವಾಗಿ ಅಲ್ಲದಿದ್ದರೂ ತನ್ನ ಸಮರ್ಥನಾ ಧಾಟಿಯ ಮಾತುಗಳಿಂದ ಒಪ್ಪಿಕೊಂಡಿದ್ದ.
ಈಗ..
ಮೋದಿ ಸರ್ಕಾರದ ಪರ್ವದಲ್ಲಿ ಯಾಸಿನ್ ಮಲಿಕ್ ಜೈಲಿನಲ್ಲಿದ್ದಾನೆ. ಶ್ರೀನಗರದಲ್ಲಿ ನಾಲ್ಕು ವಾಯುಸೇನೆ ಅಧಿಕಾರಿಗಳ ಹತ್ಯೆಯ ವಿಚಾರದಲ್ಲಿ 30 ವರ್ಷಗಳ ನಂತರ ಯಾಸಿನ್ ಮಲಿಕ್ ವಿರುದ್ಧ ಪ್ರಕರಣ ದಾಖಲಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಹಿಂದಿನ ಆಡಳಿತಗಳು ಪ್ರಧಾನಿ ಕಚೇರಿಯಲ್ಲಿ ಈ ಶಂಕಿತ ಉಗ್ರನಿಗೆ ಆತಿಥ್ಯ ನೀಡಿದರೆ, ಈಗಿನ ಆಡಳಿತದಲ್ಲಿ ತನಿಖಾ ಏಜೆನ್ಸಿಗಳು ಆತನನ್ನು ಬೀದಿಯಲ್ಲಿ ಕುತ್ತಿಗೆ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿವೆ.
ಅಷ್ಟರಮಟ್ಟಿಗೆ ನ್ಯಾಯ ಒದಗಿಸುವ ಪ್ರಯತ್ನಗಳಾಗಿವೆ.