ಹೊಸ ದಿಗಂತ ವರದಿ,ಮಡಿಕೇರಿ:
ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಗೆ ನುಗ್ಗಿದ ಪರಿಣಾಮ ಅರ್ಧ ಮನೆಯೇ ಧ್ವಂಸಗೊಂಡು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರಸಂತೆ ಸಮೀಪದ ಒಡೆಯನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಸ್ತೆ ಬದಿಯಲ್ಲಿರುವ ಮಲ್ಲೇಶ್ ಅವರ ಅರ್ಧ ಮನೆ ಧ್ವಂಸಗೊಂಡಿದ್ದು, ಮನೆಯಲ್ಲಿ ಟಿವಿ ನೋಡುತ್ತಿದ್ದ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಗೆ ನುಗ್ಗುವ ಮುನ್ನ ಕೊಟ್ಟಿಗೆಗೂ ಲಾರಿ ಡಿಕ್ಕಿಯಾಗಿದ್ದು, ಕೊಟ್ಟಿಗೆಯಲ್ಲಿದ್ದ ಹಸುಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅಕ್ಕಪಕ್ಕದವರ ನೆರವಿನಿಂದ ಹಸುಗಳ ರಕ್ಷಣೆ ಮಾಡಲಾಗಿದೆ.
ಲಾರಿಯು ಉಡುಪಿ ಜಿಲ್ಲೆಯಿಂದ ಕುಶಾಲನಗರ ಮೂಲಕ ಸಕಲೇಶಪುರಕ್ಕೆ ಹೋಗುತ್ತಿತ್ತೆನ್ನಲಾಗಿದ್ದು, ಘಟನೆಯಿಂದಾಗಿ ಲಾರಿ ಚಾಲಕ ಸಂತೋಷ್ಗೆ ಸಣ್ಣಪುಟ್ಟ ಗಾಯವಾಗಿದೆ.
ರಸ್ತೆಗೆ ಕಿಡಿಗೇಡಿಗಳು ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟಿದ್ದರಿಂದ ಅನಾಹುತವಾಗಿರುವುದಾಗಿ ಹೇಳಲಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.