August 24, 2026
Monday, August 24, 2026
spot_img

ರಾಜಭವನದಲ್ಲಿ ತ್ರಿಮೂರ್ತಿಗಳ ಪದಗ್ರಹಣ: ಮಾಹಿತಿ ಆಯೋಗಕ್ಕೆ ಹೊಸ ಸಾರಥಿಗಳ ಸೇರ್ಪಡೆ!

ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ನೂತನವಾಗಿ ನೇಮಕಗೊಂಡಿರುವ ಮೂವರು ಆಯುಕ್ತರು – ಡಾ. ರಿಚರ್ಡ್ ವಿನ್ಸೆಂಟ್‌ ಡಿಸೋಜ, ಬಿ. ವೆಂಕಟ್ ಸಿಂಗ್, ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ಇಂದು ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ರಾಜಭವನದ ಬ್ಯಾಂಕ್ವೇಟ್ ‌ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರಳ ಹಾಗೂ ಘನತೆಯ ಸಮಾರಂಭದಲ್ಲಿ, ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನವಾಗಿ ನೇಮಕಗೊಂಡ ಈ ಮೂವರು ರಾಜ್ಯ ಮಾಹಿತಿ ಆಯುಕ್ತರುಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ, ನೂತನ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ರೀತಿ ಗಮನ ಸೆಳೆಯಿತು. ಬೆಂಗಳೂರು ಪೀಠಕ್ಕೆ ನೇಮಕವಾಗಿರುವ ಡಾ. ರಿಚರ್ಡ್ ವಿನ್ಸೆಂಟ್‌ ಡಿಸೋಜ ಮತ್ತು ಡಾ. ಮಹೇಶ್ ವಾಳ್ವೇಕರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕಲಬುರಗಿ ಪೀಠಕ್ಕೆ ನೇಮಕವಾಗಿರುವ ಬಿ. ವೆಂಕಟ್ ಸಿಂಗ್ ಅವರು ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಮಹತ್ವದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಮಾಹಿತಿ ಆಯುಕ್ತರಾದ ಅಶಿತ್ ಮೋಹನ್ ಪ್ರಸಾದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್, ಮಾಹಿತಿ ಆಯೋಗದ ಹಾಲಿ ಮತ್ತು ನಿವೃತ್ತ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ನೇಮಕಾತಿಗಳು ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಮತ್ತಷ್ಟು ಬಲ ನೀಡಲಿವೆ ಎಂದು ವಿಶ್ಲೇಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !