ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀರಪ್ಪನ್ ನನ್ನು ಗುಂಡಿಕ್ಕಿ ಕೊಂದ ‘ಎನ್ಕೌಂಟರ್ ಸ್ಪೆಷಲಿಸ್ಟ್’, ತಮಿಳುನಾಡಿನ ತಿರುವಣ್ಣಾಮಲೈ ಎಡಿಎಸ್ಪಿ ಎಸ್. ವೆಲ್ಲದುರೈ ಅವರ ಅವರ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು ಹೈಡ್ರಾಮಾ ನಡೆದಿದೆ.
ಎನ್ಕೌಂಟರ್ ಸ್ಪೆಷಲಿಸ್ಟ್ (Encounter Specialist) ಎಂದೇ ಖ್ಯಾತರಾಗಿದ್ದ ವೆಲ್ಲಾದುರೈ ಅವರನ್ನು ತಮಿಳುನಾಡು ಗೃಹ ಇಲಾಖೆ ಗುರುವಾರ ಅಮಾನತುಗೊಳಿಸಿತು.
ಮೂಲಗಳ ಪ್ರಕಾರ, 2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಗುರುವಾರ ಅಮಾನತುಗೊಳಿಸಲಾಗಿತ್ತು.
ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ನಿವೃತ್ತಿಗೆ (ಅಮಾನತು ಹಿಂಪಡೆದು) ಅವಕಾಶ ನೀಡಿದೆ. ಅಲ್ಲದೇ ವೆಲ್ಲಾದುರೈ ಅವರ ನಿವೃತ್ತಿ ಫಂಡ್ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 27, 2012 ರಂದು ಮರುತುಪಾಂಡಿಯಾರ್ ಜಯಂತಿಯ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಟಿ.ಅಲ್ವಿನ್ ಸುಧನ್ ಅವರನ್ನು ಕೊಂದ ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಆರೋಪಿಯಾಗಿದ್ದ. ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಸಿಬಿ-ಸಿಐಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಬಿಡುವಂತೆ ಶಿಫಾರಸು ಮಾಡಿತ್ತು.
2021ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಕಾಂಚೀಪುರಂ ಜಿಲ್ಲೆಯ ಕೈಗಾರಿಕಾ ಘಟಕಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿದ ಸಮಾಜವಿರೋಧಿಗಳ ಮೇಲೆ ನಿಗಾ ವಹಿಸಲು ಮತ್ತು ನಿಯಂತ್ರಿಸಲು ತಮಿಳುನಾಡು ಸರ್ಕಾರವು ವೆಲ್ಲಾದುರೈ ಅವರನ್ನು ರಾಜ್ಯ ಪೊಲೀಸ್ ವಿಶೇಷ ವಿಭಾಗದ ವಿಶೇಷ ಅಧಿಕಾರಿಯಾಗಿ ನೇಮಿಸಿತ್ತು.