ಭಾರತದ ಪ್ರತಿಭಟನೆಗಳ ಮೇಲೆ ಕಮೆಂಟ್ ಮಾಡಿದ್ದ ಕೆನಡಾ ಪ್ರಧಾನಿಗೀಗ ದೇಶದಲ್ಲೇ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ರೈತರ ಪ್ರತಿಭಟನೆಗಳಾಗುತ್ತಿದ್ದಾಗ, ಅದು ಇಲ್ಲಿನ ಆಂತರಿಕ ವಿಚಾರವಾಗಿದ್ದರೂ ಕೆನಡಾ ಪ್ರಧಾನಿ ಟ್ರುಡೇವ್ ಆ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಇದೀಗ ಅವರ ದೇಶದಲ್ಲೇ ಟ್ರಕ್ ಚಾಲಕರ ಸಂಘ ವ್ಯಾಕ್ಸಿನ್ ವಿಚಾರದಲ್ಲಿ ಬಹಳ ದೊಡ್ಡ ಪ್ರತಿಭಟನೆ ನಡೆಸುತ್ತಿದೆ.

ಪ್ರತಿಭಟನೆಗಳು ಭುಗಿಲೆದ್ದಂತೆ ಪ್ರಧಾನಿ ಜಸ್ಟಿನ್ ಟ್ರುಡೇವ್ ಹಾಗೂ ಅವರ ಕುಟುಂಬ ದೇಶದ ರಾಜಧಾನಿಯಲ್ಲಿರುವ ತಮ್ಮ ನಿವಾಸವನ್ನು ತೊರೆದು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗಡಿಯಾಚೆಗಿನ ಟ್ರಕ್ ಚಾಲಕರಿಗೆ ಲಸಿಕೆ ವಿಷಯವಾಗಿ ಆರಂಭವಾಗಿದ್ದ ಪ್ರತಿಭಟನೆ ಇದೀಗ ದೊಡ್ಡ ಮಟ್ಟ ತಲುಪಿದ್ದು, ಟ್ರುಡೇವ್ ಸರ್ಕಾರದ ಕೊರೋನಾ ನಿಯಮಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕೋವಿಡ್ ಲಸಿಕೆ ಕುರಿತ ಆದೇಶಗಳು ಹಾಗೂ ಇತರೆ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸುವಂತೆ ಟ್ರಕ್ ಚಾಲಕರು ಒತ್ತಾಯಿಸಿದ್ದು, ರಾಜಧಾನಿಯಲ್ಲಿ ಸಾವಿರಾರು ಚಾಲಕರು ಒಗ್ಗಟ್ಟಾಗಿ ಪ್ರತಿಭಟಿಸಿದ್ದರು ಎಂದು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ ವರದಿ ಮಾಡಿದೆ.

ಮಕ್ಕಳು, ವೃದ್ಧರು, ದಿವ್ಯಾಂಗರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೆಲವರು ಪ್ರಧಾನಿ ಟ್ರುಡೇವ್ ವಿರುದ್ಧ ಆಕ್ರೋಶಕಾರಿ ಹಾಗೂ ಅಶ್ಲೀಲವಾದ ಚಿಹ್ನೆಗಳ ಬೋರ್ಡ್ ಪ್ರದರ್ಶಿಸಿ ತಮ್ಮ ಸಿಟ್ಟನ್ನು ಹೊರಹಾಕಿದ್ದರು ಎಂದು ದಿ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ವರದಿ ಮಾಡಿದೆ.

ಈ ಭಾಗದಲ್ಲಿ ಅತಿಯಾದ ಚಳಿ ವಾತಾವರಣ ಇದ್ದು, ತೀವ್ರ ಶೀತದ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದು ಸೇರಿದ್ದರು. ಸಂಸತ್ತಿನ ಆವರಣಕ್ಕೆ ಪ್ರತಿಭಟನಾಕಾರರು ನುಗ್ಗಿದ್ದು, ಯಾವುದೇ ಹಿಂಸಾಸ್ಮಕ ಘಟನೆಗಳು ಜರುಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.

ಕೆಲವು ಪ್ರತಿಭಟನಾಕಾರು ಪ್ರಮುಖ ಯುದ್ಧ ಸ್ಮಾರಕಗಳ ಮೇಲೆ ನಿಂತು ನೃತ್ಯ ಮಾಡಿದ್ದಾರೆ. ಯುದ್ಧ ಸ್ಮಾರಕಗಳಿಗೆ ಅಗೌರವ ತೋರಿಸಿದ್ದನ್ನು ಕೆನಡಾದ ಉನ್ನತ ಸೈನಿಕ ಜನರಲ್ ವೇಯ್ನ್ ಐರ್ ಖಂಡಿಸಿದ್ದು, ಈ ರೀತಿ ಯುದ್ಧ ಸ್ಮಾರಕಗಳ ಮೇಲೆ ಕುಣಿಯುತ್ತಿರುವುದು ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಅಪವಿತ್ರಗೊಳಿಸಿರುವುದು ನಾಚಿಕೆಗೇಡಿನ ಕೃತ್ಯ. ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಇಂಥ ಕೃತ್ಯದಲ್ಲಿ ಭಾಗಿಯಾದವರು ನಾಚಿಕೆಯಿಂದ ನೇಣು ಹಾಕಿಕೊಂಡು ಸಾಯಬೇಕು ಎಂದು ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!