ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗದ ನೆಪದಲ್ಲಿ ವಂಚನೆಗೊಳಗಾಗಿ ರಷ್ಯಾದಲ್ಲಿ ಸಿಲುಕಿಕೊಂಡು ಕೊನೆಗೂ ದಿಲ್ಲಿ ತಲುಪಿದ್ದ ಕೇರಳದ ಪ್ರಿನ್ಸ್ ಸೆಬಾಸ್ಟಿಯನ್ ಸುರಕ್ಷಿತವಾಗಿ ತಾಯ್ನಾಡಿಗೆ ಕಾಲಿಟ್ಟಿದ್ದಾರೆ. ಇದೇ ರೀತಿ ವಂಚನೆಗೊಳಗಾಗಿರುವ ಇನ್ನೋರ್ವ ಡೇವಿಡ್ ಮುತ್ತಪ್ಪನ್ ಇನ್ನೂ ದೆಹಲಿಯಲ್ಲೇ ಇದ್ದಾರೆ.
ಸಿಬಿಐ ಕಚೇರಿಯಲ್ಲಿ ಹೇಳಿಕೆ ದಾಖಲಿಸಿಕೊಂಡ ಬಳಿಕ ಅವರನ್ನು ಕೇರಳಕ್ಕೆ ಕಳುಹಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಿನ್ಸ್ ಸೆಬಾಸ್ಟಿಯನ್ ಹಾಗೂ ಡೇವಿಡ್ ಮುತ್ತಪ್ಪನ್ ಅವರನ್ನು ಟ್ರಾವೆಲ್ ಏಜೆಂಟ್ಗಳು ಸೆಕ್ಯುರಿಟಿ ಕೆಲಸ ನೀಡುವುದಾಗಿ ರಷ್ಯಾಕ್ಕೆ ಕರೆದೊಯ್ದಿದ್ದರು. ಬಳಿಕ ಅವರ ಪಾಸ್ಪೋರ್ಟ್ಗಳನ್ನು ಏಜೆಂಟ್ಗಳು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ತಮ್ಮನ್ನು ಯುದ್ಧ ವಲಯಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ತಮ್ಮನ್ನು 22 ದಿನಗಳ ತರಬೇತಿಯ ನಂತರ, ಬಂದೂಕು ನೀಡಿ ಯುದ್ಧಭೂಮಿಗೆ ಕಳುಹಿಸಲಾಗಿತ್ತು. ಮೊದಲ ದಿನವೇ ಗುಂಡು ತಗುಲಿ ಕಾಲು ಹಾಗೂ ಮುಖಕ್ಕೆ ಗಾಯವಾಗಿತ್ತು. ಭೂಗತ ಸುರಂಗದ ಮೂಲಕ ತಪ್ಪಿಸಿಕೊಂಡೆವು. ನಂತರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿತ್ತು ಎಂದು ಪ್ರಿನ್ಸ್ ಹೇಳಿದ್ದಾರೆ.