ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ಯಾಂಡಲ್ವುಡ್ ನಟ ದರ್ಶನ್ ಬೆಂಬಲಕ್ಕೆ ನಿಂತಿದ್ದ ಅವರ ಆಪ್ತ ನಟ ಧನ್ವೀರ್, ಇತ್ತೀಚೆಗೆ ದರ್ಶನ್ ತಂಡದಿಂದ ಅಂತರ ಕಾಯ್ದುಕೊಂಡಿದ್ದರು ಎಂಬ ಸುದ್ದಿಯಿತ್ತು. ‘ಡಿ-ಬಾಸ್’ ಜೈಲು ಸೇರಿದ ಮೇಲೆಯೂ ಅವರ ಕುಟುಂಬದ ನೆರಳಿನಂತೆ ನಿಂತು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಪ್ರತಿಯೊಂದು ಹಂತದಲ್ಲೂ ಸಾಥ್ ನೀಡಿದ್ದ ಧನ್ವೀರ್ ದಿಢೀರನೆ ಕಣ್ಮರೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ವಿಜಯಲಕ್ಷ್ಮಿ ಸಾಥ್ ತೊರೆದಿದ್ದ ಧನ್ವೀರ್
ದೇವಸ್ಥಾನಗಳ ಭೇಟಿ ಹಾಗೂ ಜೈಲಿನಲ್ಲಿ ದರ್ಶನ್ ಭೇಟಿಯ ವೇಳೆ ಸದಾ ವಿಜಯಲಕ್ಷ್ಮಿ ಜೊತೆಗಿರುತ್ತಿದ್ದ ಧನ್ವೀರ್, ಕಳೆದ ಕೆಲವು ದಿನಗಳಿಂದ ಒಂಟಿಯಾಗಿಯೇ ಓಡಾಡುತ್ತಿರುವ ವಿಜಯಲಕ್ಷ್ಮಿ ಜೊತೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ದರ್ಶನ್ ಆಪ್ತರ ವಲಯದಲ್ಲೇ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಚರ್ಚೆಗೆ ನಾಂದಿ ಹಾಡಿತ್ತು.
ಆರ್ಥಿಕ ವ್ಯವಹಾರವೇ ಅಂತರಕ್ಕೆ ಕಾರಣವೇ?
ಇದೀಗ ಇದ್ದಕ್ಕಿದ್ದಂತೆ ನಟ ಧನ್ವೀರ್ ಅವರು ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಭೇಟಿಯು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಗಾಸಿಪ್ಗಳ ಪ್ರಕಾರ ಇಬ್ಬರ ನಡುವಿನ ಶೀತಲ ಸಮರಕ್ಕೆ ಹಣಕಾಸಿನ ವ್ಯವಹಾರವೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಆದರೆ, ಈ ಎಲ್ಲ ವದಂತಿಗಳಿಗೆ ನಿಜವಾದ ಸ್ಪಷ್ಟನೆ ಸಿಗಬೇಕಾದರೆ ಸ್ವತಃ ಧನ್ವೀರ್ ಅಥವಾ ದರ್ಶನ್ ಕುಟುಂಬವೇ ಉತ್ತರಿಸಬೇಕಿದೆ.



