ಹೊಸ ದಿಗಂತ ವರದಿ, ಮದ್ದೂರು:
ಕುರಿಗಳನ್ನು ತೊಳೆಯಲು ಹೋಗಿದ್ದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಗೆರೆಪುರದ ಬಳಿ ಮಂಗಳವಾರ ಜರುಗಿದೆ.
ಗ್ರಾಮದ ಚನ್ನಯ್ಯನ ಪುತ್ರ ಅಂದಾನಿ (35) ಎಂಬಾತನೇ ಮೃತ ವ್ಯಕ್ತಿ. ಮಂಗಳವಾರ ಬೆಳಗ್ಗೆ ಅಂದಾನಿ ಗ್ರಾಮದ ಸಮೀಪದ ಕೆರೆ ಬಳಿ ಕುರಿಗಳನ್ನು ಮೇಯಿಸುತ್ತಿದ್ದ. ನಂತರ ಕೆಳಗಿಳಿದು ಕುರಿಗಳನ್ನು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮದ್ದೂರು ಅಗ್ನಿ ಶಾಮಕ ಠಾಣಾಧಿಕಾರಿ ಎಂ.ಆರ್. ಶಿವಾನಂದ್ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತಯ್ಯಘಿ, ವೆಂಕಟೇಶ್, ಪ್ರೀತಂ ಅವರುಗಳು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಕೆರೆ ಹೂಳಿನಲ್ಲಿ ಸಿಲುಕಿಕೊಂಡಿದ್ದ ಶವವನ್ನು ಪಾತಾಳಗರಡಿ ಬಳಸಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದರು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.