ಹೊಸ ದಿಗಂತ ವರದಿ , ರಾಯಚೂರು :
ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಕಾರಣದಿಂದ ದೆಹಲಿ ಸರ್ಕಾರ ನೀಡಿದ ಕೆಲ ಉಚಿತ ಯೋಜನೆಗಳನ್ನು ನಕಲು ಮಾಡಿ ಅವುಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಎಪಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿಡಾ ಅವರು, ನಕಲು ಮಾಡಿದ ಯೋಜನೆಗಳನ್ನು ಸರಿಯಾಗಿ ಜಾರಿಗೆ ಮಾಡಲು ಆಗುತ್ತಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಅರೆಬರಿಯಾಗಿ ಜಾರಿ ಮಾಡಿ, ಹೆಣ್ಣು ಮಕ್ಕಳನ್ನು ಪರದಾಡುವ ಸ್ಥಿತಿಗೆ ತಂದಿದೆ. ರಾಜ್ಯದಲ್ಲಿ ವಿದ್ಯುತ್ ಸ್ಥಿತಿ ಅದ್ವಾನವಾಗಿದೆ. ಎಲ್ಲಾ ಯೋಜನೆಗಳು ಬಹುತೇಕ ಆಗಿಲ್ಲ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ಒಂದು ಕಡೆ ಮೀಸಲಿಟ್ಟ ಅನುದಾನ ತಂದು ಇನ್ನೊಂದು ಕಡೆ ಬಳಸಿಕೊಂಡರೆ ಅದನ್ನು ಉಚಿತ ಯೋಜನೆ ಎನ್ನುವುದಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಬರುವ ಲೋಕಸಭಾ ಚುನಾವಣೆ ಹಿತ ದೃಷ್ಟಿಯಿಂದ ಯೋಜನೆಗಳನ್ನು ಕೊಡುತ್ತಿದ್ದಾರಷ್ಟೇ, ಅಭಿವೃದ್ಧಿ ಹಿತದೃಷ್ಟಿಯಾಗಲಿ, ಪ್ರಗತಿ ಹಿತದೃಷ್ಟಿಯಿಂದಾಗಲಿ ಯೋಜನೆಗಳನ್ನು ಕೊಡುತ್ತಿಲ್ಲ. ಇಲ್ಲಿ ಅಧಿಕಾರದ ಆಸೆ, ಕುಟುಂಬ ರಾಜಕಾರಣ, ಆಸ್ತಿ ಮಾಡುವ ರಾಜಕಾರಣದ ಶಾಸಕರು, ಸಂಸದರು ಇರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ದೇಶದಲ್ಲಿಯೇ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು, ಈ ಭಾಗದಿಂದ ಅನ್ನ, ಬೆಳಕು, ಹತ್ತಿ, ಚಿನ್ನ ದೇಶಕ್ಕೆ ಕೊಡುಗೆಯಾಗಿ ಕೊಡಲಾಗುತ್ತಿದೆ. ಹತ್ತಿಯನ್ನೇ ಬೆಳೆಯದ ಕಲಬುರ್ಗಿ ಜಿಲ್ಲೆಗೆ ಟೆಕ್ಸ್ಟೈಲ್ ಪಾರ್ಕ್ ಮಂಜೂರು ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.