ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಡೆಂಗ್ಯೂ ಉಲ್ಬಣವಾಗಿದ್ದು, ಸರ್ಕಾರ ಇದೀಗ ಫೀವರ್ ಕ್ಲಿನಿಕ್ ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದು, ಡೆಂಗ್ಯೂ ನಿಯಂತ್ರಣ ಕ್ರಮ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.
ಡೆಂಗ್ಯೂ ಹೆಚ್ಚಿರುವ ಪ್ರದೇಶಗಳನ್ನು ಪತ್ತೆ ಹಚ್ಚಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಡೆಂಗ್ಯೂ ಹೆಚ್ಚಿರುವ ಪ್ರದೇಶದಲ್ಲಿ ಯಾರಿಗೆ ಜ್ವರ ಕಂಡು ಬಂದರೂ ಕಡ್ಡಾಯವಾಗಿ ಡೆಂಗ್ಯೂ ಪರೀಕ್ಷೆಗೊಳಪಡಿಸಬೇಕು. ಆರಂಭದಲ್ಲಿಯೇ ಡೆಂಗ್ಯೂ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯವಿದೆ.
ಒಂದು ವೇಳೆ ವಿಳಂಬವಾದರೆ ಸಾವುಗಳು ಸಂಭವಿಸಲಿವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು. ನಿಮ್ಮ ಮನೆ ಹಾಗೂ ಮನೆಯ ಸುತ್ತಮುತ್ತವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸೊಳ್ಳೆಗಳು ಬಾರದಂತೆ ತಡೆಗಟ್ಟಿ ಎಂದು ಹೇಳಿದ್ದಾರೆ.