ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿ ಆತಂಕ ಮುಂದುವರೆದಿದ್ದು, ಸಾಲು ಸಾಲು ಜಾನುವಾರುಗಳು ಬಲಿಯಾಗುತ್ತಿವೆ.
ತೂಚಮಕೇರಿ ಗ್ರಾಮದ ಪುಟ್ಟಂಗಡ ಚೇತನ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ.
15 ದಿನಗಳ ಹಿಂದೆಯಷ್ಟೇ ಬಲ್ಯಮಂಡೂರು ಗ್ರಾಮದ ಚೇಂದಿರ ಸುರೇಶ್ ಅವರ ಎಮ್ಮೆಯನ್ನು ಹುಲಿ ಬಲಿ ಪಡೆದಿತ್ತು. ಕಳೆದ ವರ್ಷ ಕೂಡಾ ಚೇತನ್ ಅವರಿಗೆ ಸೇರಿದ ಹಸುವೊಂದನ್ನು ಹುಲಿ ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಉಪಟಳ ನಿರಂತರವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಹುಲಿ ಸೆರೆಗೆ ಬೋನ್ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ.
ಹಸುಗಳ ಮಾಲಕರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದರು.
ಮಾಯಮುಡಿಯ ರುದ್ರಬೀಡು ಎಂಬಲ್ಲಿ ಮತ್ತೊಂದು ಹಸುವನ್ನು ಹುಲಿ ಕೊಂದು ಹಾಕಿದೆ. ದಕ್ಷಿಣ ಕೊಡಗಿನ ಹುಲಿ ಉಪಟಳದ ಭಾಗಗಳಲ್ಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ಕೊಯ್ಲಿನ ಸಮಯವಾಗಿರುವುದರಿಂದ ಬೆಳೆಗಾರರು ಅತಂತ್ರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.