ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸುಗ್ಗಿಯ ಹಿಗ್ಗನ್ನು ಹೆಚ್ಚಿಸುವ ಸಂಕ್ರಾಂತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ.
ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸಮಯವನ್ನು ಉತ್ತರಾಯಣ ಪರ್ವಕಾಲ ಎನ್ನಲಾಗುತ್ತದೆ. ಇಂದು ಸೂರ್ಯನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದಕ್ಕಾಗಿಯೇ ಇದನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತದೆ.
ಈ ದಿನ ಸೂರ್ಯದೇವನನ್ನು ಪೂಜಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಚಳಿಗಾಲ ಅಂತ್ಯಗೊಂಡು, ವಸಂತಕಾಲ ಆರಂಭವಾಗುತ್ತದೆ ಎನ್ನಲಾಗುತ್ತದೆ. ವರ್ಷವಿಡೀ ಬೆಳಕು ನೀಡಿದ, ಫಲ, ಪುಷ್ಪ, ಕೃಷಿ ಅಭಿವೃದ್ಧಿಗೆ ಸಹಕರಿಸಿ ಸೂರ್ಯನಿಗೆ ಹಾಗೂ ಧನ ಧಾನ್ಯ ಅಭಿವೃದ್ಧಿಗೆ ಸಹಕರಿಸಿದ ರಾಸುಗಳಿಗೆ ಪೂಜೆ ಮೂಲಕ ಗೌರವ ಸೂಚಿಸಲಾಗುತ್ತದೆ.
ಉತ್ತರಾಯಣ ಆರು ತಿಂಗಳುಗಳು ದೇವತೆಗಳಿಗೆ ಒಂದು ಹಗಲಿದ್ದಂತೆ, ಈ ಸಮಯದಲ್ಲಿ ದೇವತೆಗಳು ಎಚ್ಚರದಿಂದಿರುತ್ತಾರೆ. ಈ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನಲಾಗುತ್ತದೆ. ಇದೇ ಉತ್ತರಾಯಣ ಕಾಲದಲ್ಲಿ ಸೃಷ್ಟಿಕರ್ತ ಬ್ರಹ್ಮ, ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದ ಎನ್ನಲಾಗುತ್ತದೆ.
ಪರ್ವತರಾಜನ ಮಗಳಾಗಿ ಪಾರ್ವತಿ ದೇವಿ ಹುಟ್ಟಿ, ಶಿವನಿಗಾಗಿ ಘೋರ ತಪಸ್ಸು ಮಾಡಿ ಶಿವನ ಮನಸ್ಸನ್ನು ಒಲಿಸುತ್ತಾಳೆ. ಹಿಮವಂತ ಹಾಗೂ ಶಿವಗಣಗಳ ನೇತೃತ್ವದಲ್ಲಿ ಶಿವ ಪಾರ್ವತಿ ದೇವಿಯನ್ನು ವರಿಸುತ್ತಾನೆ. ಇದು ಕೂಡ ಉತ್ತರಾಯಣ ಪುಣ್ಯಕಾಲದಲ್ಲೇ ನಡೆದಿದೆ ಎನ್ನಲಾಗುತ್ತದೆ.
ಸಂಕ್ರಾಂತಿ ದಿನ ನಸುಕಿನಲ್ಲೇ ಎದ್ದು, ಸ್ನಾನ ನೆರವೇರಿಸಿ, ಹೊಸ ಬಟ್ಟೆ ಧರಿಸಿ, ಬಣ್ಣದ ರಂಗೋಲಿ ಬಿಡಿಸಬೇಕು. ನಂತರ ಸಗಣಿ ಉಂಡೆ ಮಾಡಿ ಪೂಜಿಸಿ, ಅದನ್ನು ಭೂದೇವಿ ಎಂದು ಭಾವಿಸಿ ಪೂಜಿಸಬೇಕು. ಪೂಜೆ ನೆರವೇರಿಸಿ ಎಳ್ಳು ಬೆಲ್ಲ ಸೇವಿಸಬೇಕು. ಬಂದವರಿಗೂ ಎಳ್ಳು ದಾನ ಮಾಡಬೇಕು.