ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದಾದರೆ ಆತಿಥ್ಯದ ಹಕ್ಕನ್ನು ಇಟ್ಟುಕೊಂಡು ಏನು ಪ್ರಯೋಜನ. ನಾವು ಅದನ್ನು ವಾಪಸ್ ಕೊಡುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಭಾರತ ತಂಡವನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳಬೇಕೆಂಬ ಹಠ ಸಾಧಿಸಿರುವ ಅವರು, ಇದೀಗ ಹೊಸ ವರಸೆ ಶುರುಮಾಡಿದ್ದಾರೆ.
೨೦೨೩ರ ಏಷ್ಯಾ ಕಪ್ ಆತಿಥ್ಯ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ, ಟೂರ್ನಿ ಅಲ್ಲಿ ನಡೆಯುವುದಿಲ್ಲ. ಬದಲಾಗಿ ತಟಸ್ಥ ತಾಣದಲ್ಲಿ ಆಯೋಜಿಸಲಾಗುತ್ತದೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾಗಿರುವ ಜಯ್ ಶಾ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ನಾವು ನ್ಯಾಯಯುತವಾಗಿ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದ್ದೇವೆ. ಭಾರತ ತಂಡ ಬರದೇ ಹೋದರೆ, ನಮ್ಮ ದೇಶದಿಂದ ಹೊರಕ್ಕೆ ನಡೆಸುವುದಾದರೆ ನಾವು ಹಕ್ಕನ್ನು ವಾಪಸ್ ನೀಡುತ್ತೇವೆ ಎಂಬುದಾಗಿ ರಮೀಜ್ ಹೇಳಿದ್ದಾರೆ.
ಮೊನ್ನೆಯವರೆಗೆ ಭಾರತ ತಂಡ ಪಾಕಿಸ್ತಾನಕ್ಕೆ ಬರದೇ ಹೋದರೆ, ಮುಂಬರುವ ವಿಶ್ವ ಕಪ್ಗೆ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ರಮೀಜ್ ರಾಜಾ ಹೇಳಿದ್ದರು. ಇದೀಗ ಮತ್ತೊಂದು ವಾದ ಶುರು ಮಾಡಿದೆ.