ಹೊಸದಿಗಂತ ವರದಿ, ಶ್ರೀರಂಗಪಟ್ಟಣ :
ಪಟ್ಟಣ ಸಮೀಪದ ಶ್ರೀ ನಿಮಿಷಾಂಭ ದೇವಸ್ಥಾನದ ಬಳಿ ಕಾವೇರಿ ನದಿಗಿಳಿದ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಚೆನ್ನೈ ನಗರದ ಯುವರಾಜ್ ಅವರ ಮಗ ವಿಶಾಲ್ (19) ಮತ್ತು ಮಾನುಸಿಂಗ್ ಅವರ ಮಗ ರೋಹನ್ (18) ಮೃತ ಯುವಕರು ಎಂದು ತಿಳಿದು ಬಂದಿದೆ.
ಚೆನ್ನೈನಿಂದ ಮೈಸೂರಿನ ತಮ್ಮ ಅಜ್ಜಿಯ ಮನೆಗೆ ಬಂದಿದ್ದ ಇವರು ಅಲ್ಲಿಂದ ತಮ್ಮ ಬಂಧುಗಳ ಜೊತೆಯಲ್ಲಿ ಗುರುವಾರ ಮಧ್ಯಾಹ್ನ ನಿಮಿಷಾಂಬಾ ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಈಜಲು ಇಬ್ಬರೂ ನದಿಗೆ ಇಳಿದಿದ್ದು, ವಿಶಾಲ್ ಮತ್ತು ರೋಹನ್ ಇಬ್ಬರಿಗೂ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಎಸ್ಐ ಶಿವಲಿಂಗ ದಳವಾಯಿ ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಶವಗಳನ್ನು ನದಿಯಿಂದ ಮೇಲೆ ತೆಗೆದಿದ್ದು, ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.