ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ತಾವಿ ರೈಲು ನಿಲ್ದಾಣದಲ್ಲಿ ಮೊದಲ ನೇರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿದರು. ಈ ಮೂಲಕ ದಶಕಗಳ ಕನಸು ಇಂದು ನನಸಾಗಿದೆ .
ಈ ರೈಲು ಸಂಪರ್ಕದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣ ಮತ್ತಷ್ಟು ಹತ್ತಿರವಾಗಲಿದೆ. ಜೊತೆಗೆ ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೂವೇಗ ಸಿಗಲಿದೆ.
ಈ ಹಿಂದೆ ಪ್ರಯಾಣಿಕರು ಶ್ರೀನಗರದಿಂದ ಜಮ್ಮುವಿಗೆ ಹೋಗಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೀಗ ರೈಲು ಯೋಜನೆಯಿಂದಾಗಿ ನೇರವಾಗಿ ಪ್ರಯಾಣಿಸಬಹುದು. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ವೈಷ್ಣೋ ದೇವಿಗೆ ಪ್ರಯಾಣಿಸುವ ಭಕ್ತರಿಗೂ ಸುಗಮ ಪ್ರಯಾಣಕ್ಕೆ ಸಹಕಾರಿಯಾಗಿದೆ.
ಮೊದಲನೇ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದ್ದು, ಬೆಳಿಗ್ಗೆ 6:20ಕ್ಕೆ ಜಮ್ಮುವಿನಿಂದ ಹೊರಟು 11:10ಕ್ಕೆ ಶ್ರೀನಗರ ತಲುಪಲಿದೆ. ಮಧ್ಯಾಹ್ನ 2:00 ಗಂಟೆಗೆ ಶ್ರೀನಗರದಿಂದ ಹೊರಟು ಸಂಜೆ 6:50ಕ್ಕೆ ಜಮ್ಮು ತಲುಪಲಿದೆ.
ಎರಡನೇ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದ್ದು, ಶ್ರೀನಗರದಿಂದ ಬೆಳಿಗ್ಗೆ 8:00 ಗಂಟೆಗೆ ಹೊರಟು ಮಧ್ಯಾಹ್ನ 12:40ಕ್ಕೆ ಜಮ್ಮು ತಲುಪಲಿದೆ. ಈ ರೈಲುಗಳು ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ಬನಿಹಾಲ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.



