ಹೊಸದಿಗಂತ ವರದಿ ಆಲೂರು :
ಕುಂದೂರು ಹೋಬಳಿ ಅಡಿಬೈಲು ಗ್ರಾಮದ ಬೆಟ್ಟದ ಮೇಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೇವಸ್ಥಾನದೊಳಗೆ ಎರಡನೆ ಅಂಕಣದಲ್ಲಿದ್ದ ಹುಂಡಿಯನ್ನು ವೆಲ್ಡಿಂಗ್ ಮೂಲಕ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಪಟ್ಟಣ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಿ. ಉಮೇಶ್ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಸಬ್ಇನ್ಸ್ಪೆಕ್ಟರ್ ಚನ್ನೇಗೌಡ, ಸಿಬ್ಬಂದಿಗಳಾದ ಸೋಮಶೇಖರ್, ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಪುರಾತನ ಪ್ರಸಿದ್ಧವಾದ ಈ ದೇವಾಲಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹುಂಡಿಯಲ್ಲಿರುವ ಹಣವನ್ನು ಇಲಾಖಾ ವತಿಯಿಂದ ತೆಗೆಯಲಾಗುತ್ತದೆ. ದೊಡ್ಡಬೆಟ್ಟ ರಕ್ಷಿತಾ ಅರಣ್ಯ ಪ್ರದೇಶದಂಚಿನಲ್ಲಿರುವ ಈ ದೇವಾಲಯದ ಸುತ್ತಮುತ್ತ ಕಾಡಾನೆಗಳ ನೆಲೆಯಾಗಿರುವ ಕಾರಣ ರಾತ್ರಿ ವೇಳೆಯಲ್ಲಿ ಇಲ್ಲಿ ಯಾರು ಕಾವಲು ಇಲ್ಲದಿರುವುದಿಲ್ಲ. ಈ ಕಾರಣದಿಂದ ಆಗಾಗ ಕಳ್ಳತನವಾಗುತ್ತಿರುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.