ಹೊಸದಿಗಂತ ವರದಿ ಬಳ್ಳಾರಿ:
ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂದು ಕೈ ನಾಯಕರು ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿದ್ದು, ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿದೆ, ಅದರಂತೆ ನಾನು ನಡೆಯುತ್ತಿರುವೆ, ಸೇರ್ಪಡೆ ಇರಲಿ ಇದರ ಬಗ್ಗೆ ಆಲೋಚನೆ ಮಾಡಿದರೂ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ, ಮುಖ್ಯವಾಗಿ ನನಗೆ ನೂತನ ವಿಜಯನಗರ ಜಿಲ್ಲೆಯನ್ನು ನಮ್ಮ ಸರ್ಕಾರ ಕೊಟ್ಟಿದೆ. ಇದಕ್ಕಿಂತ ಸೌಭಾಗ್ಯ ಬೇರೊಂದಿಲ್ಲ, 250ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆಗೆ ಅನುದಾನ ಕೊಟ್ಟಿದ್ದಾರೆ, ಇದರ ಜೊತೆಗೆ ನೂತನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಅನುದಾನವನ್ನು ನಮ್ಮ ಡಬಲ್ ಎಂಜಿನ್ ಸರ್ಕಾರ ಕೊಟ್ಟಿದೆ.
ಹೀಗಿರುವಾಗ ನಾನೇಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿ ? ಇದು ಶುದ್ಧ ಸುಳ್ಳು ಕೈ ನಾಯಕರ ಪಿತೂರಿ ಇದಾಗಿದೆ. ಬಿಜೆಪಿ ನನಗೆ ನೂತನ ಜಿಲ್ಲೆಯನ್ನು ಕೊಟ್ಟಾಗ ಸಚಿವ ಸ್ಥಾನವನ್ನೇ ತ್ಯಾಗ ಮಾಡಲು ಮುಂದಾಗಿದ್ದೆ, ನನಗೆ ಬಿಜೆಪಿ ಏನೂ ಕಡಿಮೆ ಮಾಡಿಲ್ಲ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು 10ಕ್ಕೂ ಹೆಚ್ಚು ಜನರಿದ್ದು, ಎಲ್ಲರಿಗೂ ನಡುಕ ಶುರುವಾಗಿದೆ, ಅದರಿಂದ ಈ ಅಪಪ್ರಚಾರ ಎಬ್ಬಿಸಿದ್ದಾರೆ. ಇದನ್ನು ಕೈ ಬಿಟ್ಟು ಟಿಕೇಟ್ ಪಡೆದು ನಮ್ಮ ವಿರುದ್ಧ ಚುನಾವಣೆ ಎದುರಿಸಲು ರೆಡಿಯಾಗಿ. ಪಕ್ಷ ಬಿಡುವ ಮಾತೇ ಇಲ್ಲ, ಪಕ್ಷ ನನಗೆ ಟಿಕೆಟ್ ನೀಡಿದರೂ ಸರಿ. ಬೇರೆ ಯಾರಿಗೆ ಕೊಟ್ಟರೂ ಸರಿ ಬಿಜೆಪಿ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ, ಗೆಲವೂ ನಮ್ಮದೇ, ನೂತನ ಜಿಲ್ಲೆಯ ಜನರು ಬಿಜೆಪಿ ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.