ಹೊಸದಿಗಂತ ವರದಿ,ಶಿವಮೊಗ್ಗ:
ದೇಶದ ಅಭಿವೃದ್ಧಿ ಕುರಿತು ಕಾಂಗ್ರೆಸ್ನಲ್ಲಿ ಯಾವ ಕನಸು ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿಶ್ಲೇಷಿಸಿದರು.
ನಗರದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಗುರುವಾರ ನಗರ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ಮಾಡಿದೆ. ಕಳೆದ 09 ವರ್ಷಗಳಿಂದ ಬಿಜೆಪಿ ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಕೇವಲ 09 ವರ್ಷಗಳಲ್ಲಿ ಬಿಜೆಪಿ ಮಾಡಿದೆ. 70 ವರ್ಷಗಳಲ್ಲಿ ದೇಶದಲ್ಲಿ 83 ವಿಮಾನ ನಿಲ್ದಾಣ ಇದ್ದವು. ಕಳೆದ 09 ವರ್ಷಗಳಲ್ಲಿ 84 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಇದು ಬಿಜೆಪಿ ಸಾಧನೆ. ದೇಶದ್ಯಾಂತ ಕಳೆದ 09 ವರ್ಷಗಳಲ್ಲಿ ಮೆಡಿಕಲ್, ನರ್ಸಿಂಗ್ ಕಾಲೇಜುಗಳ ಆರಂಭ ದ್ವಿಗುಣವಾಗಿದೆ. ದೇಶಾದ್ಯಂತ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣವಾಗಿದೆ. ಈ ಯಾವುದೇ ಕನಸು ಕಾಂಗ್ರೆಸ್ನಲ್ಲಿ ಇಲ್ಲ ಎಂದರು.
ಬಿಜೆಪಿಯಲ್ಲಿ ಮುಂದಿನ 10, 25 ವರ್ಷಗಳಲ್ಲಿ ದೇಶದಲ್ಲಿ ಏನು ಮಾಡಬೇಕು ಎಂಬ ಗುರಿ ಇದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕೇವಲ 2 ಗಂಟೆಯಲ್ಲಿ ಮೈಸೂರು ತಲುಪಲು ಮಾಡಿರುವುದಲ್ಲ. ಅಲ್ಲಿ ಮೊಬೈಲ್ ತಯಾರಿಕೆಯಿಂದ ಹಿಡಿದು ಎಲ್ಲಾ ಕೈಗಾರಿಕೆಗಳೂ ಆರಂಭವಾಗಬೇಕು ಎಂಬ ದೂರದೃಷ್ಟಿ ಇದೆ. ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.