ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಇನ್ನೂ ಐದು ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಸಬೇಕು ಎಂದು ರಾಜ್ಯಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ ನಿರ್ದೇಶಿಸಿದ್ದು, ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು, ಮಂಡ್ಯ ಭಾಗದಲ್ಲಿ ಈಗಾಗಲೇ ದೊಡ್ಡಮಟ್ಟದ ಪ್ರತಿಭಟನೆಗಳು ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ, ಯಾವ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಕೊಡಬಾರದು. ನಮ್ಮಲ್ಲಿ ಸಭೆಗೆ ವರ್ಚುಯಲ್ ಆಗಿ ಹಾಜರಾಗ್ತಾರೆ, ಆದರೆ ತಮಿಳುನಾಡಿನಲ್ಲಿ ಖುದ್ದು ಹಾಜರಾಗಿ ಅಂಕಿ ಅಂಶ ಸಮೇತ ವಾತ ಮಂಡಿಸ್ತಾರೆ. ನಮ್ಮ ಸರ್ಕಾರ ಉಡಾಫೆ, ಉಪೇಕ್ಷೆ ಮಾಡ್ತಿದೆ. ಜಲ ನಿರ್ವಹಣೆ ಪ್ರಾಧಿಕಾರ, ಜಲ ನಿಯಂತ್ರಣ ಸಮಿತಿ ಏನು ಮಾಡುತ್ತಿದೆ?
ನಮ್ಮ ರೈತರಿಗೇ ನೀರಿಲ್ಲ, ಅವರು ಬೆಳೆ ಬೆಳೆಯದಿದ್ದರೂ ಪರವಾಗಿಲ್ಲ ಆದರೂ ನೀರು ಬಿಡೋಕೆ ಸರ್ಕಾರ ಒಪ್ಪಿದ್ದೇಕೆ? ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರು ಸರ್ಕಾರದ ಮೇಲೆ ಇಟ್ಟ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ರೈತರ ತಾಳ್ಮೆಗೂ ಮಿತಿ ಇದೆ ಎಂದಿದ್ದಾರೆ.
ರೈತರ ಬಗ್ಗೆ ಕಾಳಜಿ, ಕುಡಿಯುವ ನೀರಿನ ಬಗ್ಗೆ ಚಿಂತೆ ಇದ್ದಿದ್ದರೆ ಮೊದಲ ಬಾರಿಗೆ ನೀರು ಬಿಡುವ ಮುನ್ನವೇ ಯೋಚನೆ ಮಾಡಬೇಕಿತ್ತು. ಪ್ರತೀ ಹೆಜ್ಜೆಯಲ್ಲೂ ತಪ್ಪು ಮಾಡಿಕೊಂಡು ಬಂದಿದೆ. ಈಗಲೂ ಸರಿಪಡಿಸದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂದಿದ್ದಾರೆ.