ಹೊಸದಿಗಂತ ಡಿಜಿಟಲ್ ಡೆಸ್ಕ್ :
ತಮ್ಮ ಬೇಡಿಕೆ ಈಡೇರಿಸುವ ತನಕ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ಸಾರಿಗೆ ನೌಕರರ ಸಂಘದ (Transport employees Association) ಅಧ್ಯಕ್ಷ ಹೆಚ್.ವಿ. ಅನಂತ ಸುಬ್ಬರಾವ್ ಖಡಕ್ ಆಗಿ ಹೇಳಿದ್ದಾರೆ.
ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಸಾರಿಗೆ ನೌಕರರ ಸಂಘವು ಕರೆ ಕೊಟ್ಟಿದ್ದು, ಈ ಕುರಿತು ಅವರು ಮಾತನಾಡಿದ್ದಾರೆ.
ಮಾರ್ಚ್ 21ರಂದು ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಯಲಿದೆ. ಇದರಲ್ಲಿ ಜನರಿಗೆ ತೊಂದರೆ ಮಾಡುವ ಉದ್ದೇಶ ಇಲ್ಲ. ವಜಾಗೊಂಡ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಸಾರಿಗೆ ನೌಕರರ ವೇತನ ಹೆಚ್ಚಳದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ನಾವು ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ. ವೇತನ ಹೆಚ್ಚಳ ಬಗ್ಗೆ ಸರ್ಕಾರದಿಂದ ನೋಟಿಫಿಕೇಷನ್ ಬಂದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮನ್ನು ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.
ಚುನಾವಣೆ ಪ್ರಕ್ರಿಯೆ ಇರುವುದರಿಂದ ನಾವೂ ಮಾರ್ಚ್ 21ಕ್ಕೆ ಬಂದ್ ಕರೆ ನೀಡಿದ್ದೇವೆ. ಜನರಿಗೆ ತೊಂದರೆ ಮಾಡುವ ಉದ್ದೇಶ ನಮಗೆ ಇಲ್ಲ, ಸರ್ಕಾರದಿಂದ ಆದೇಶದ ಪ್ರತಿ ಬಂದ ನಂತರ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ನೋಡಬೇಕಾಗಿದೆ. ಸದ್ಯಕ್ಕೆ ಯಾವುದೇ ಆದೇಶ ಬಾರದ ಹಿನ್ನಲೆ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಾಳೆ ಸಿಎಂ ನಮ್ಮ ಜೊತೆ ಚರ್ಚೆಗೆ ಬರಬೇಕು. ಕೇವಲ ಒಂದು ಬೇಡಿಕೆ ಈಡೇರಿಸುವ ಆದೇಶ ಬಂದರೆ ನಮ್ಮ ಹೋರಾಟ ನಡೆಯಲಿದೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಶೇಕಡಾ 14ರಷ್ಟು ವೇತನ ಹೆಚ್ಚಿಸುವುದಾಗಿ ಹೇಳಿದರು. ಅದನ್ನು ನಾವು ಒಪ್ಪಿಲ್ಲ. ಕೆಪಿಟಿಸಿಎಲ್ ನೌಕರರಿಗೆ ಶೇ 20, ಸರ್ಕಾರಿ ನೌಕರರಿಗೆ ಶೇ 17ರಷ್ಟು ವೇತನ ಹೆಚ್ಚಿಸಿದ್ದಾರೆ. ಸಾರಿಗೆ ನೌಕರರಿಗೆ ಶೇ 14ರಷ್ಟು ಸಂಬಳ ಹೆಚ್ಚಿಸುವುದಾಗಿ ಹೇಳಿದರು. ನಾವಿದನ್ನು ಒಪ್ಪಿಲ್ಲ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅಂಗಳದಲ್ಲಿ ನಮ್ಮ ಬೇಡಿಕೆ ಇದೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದರು.