ಹೊಸದಿಗಂತ ವರದಿ,ದಾವಣಗೆರೆ:
ಮದ್ಯ ಕುಡಿಯಲು ಹಣ ಕೊಡದ ಕಾರಣಕ್ಕೆ ಪಾಪಿ ತಮ್ಮನೊಬ್ಬ ತನ್ನ ಅಣ್ಣನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ವಿ.ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೋಹನ್(25 ವರ್ಷ) ತಮ್ಮನಿಂದ ಕೊಲೆಯಾದ ದುರ್ದೈವಿ. ತಮ್ಮ ಮನೋಜ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಬ್ಬರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಮದ್ಯಪಾನಕ್ಕೆ ಹಣ ಕೊಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಹಣ ಕೊಡದ ಕಾರಣಕ್ಕೆ ಸಿಟ್ಟಿಗೆದ್ದ ಮನೋಜ್ ಮನೆಯ ಹೊರಗಡೆಯಿಂದ ಕಲ್ಲು ಚಪ್ಪಡಿ ತಂದು ಮೋಹನ್ ತಲೆಯ ಮೇಲೆ ಎತ್ತಿ ಹಾಕಿದ್ದಾನೆ.
ತೀವ್ರ ರಕ್ತಸ್ರಾವವಾಗಿ ಮೋಹನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.