ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ಪೊಲೀಸರು ಶುಕ್ರವಾರ ಬೆಳಗಾವಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು.
ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ, ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಕೋರ್ಟ್ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ, ಗುರುವಾರ ಮಧ್ಯಾಹ್ನ ವಿಧಾನಸಭಾ ಕಾರಿಡಾರ್ನಲ್ಲಿ, ‘‘ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ’’ ಎಂದು ಮಂತ್ರಿ ಧಮಕಿ ಹಾಕಿದ್ದರು. ರಾತ್ರಿ ನನ್ನನ್ನು ಪೊಲಿಸರು ಎಲ್ಲೆಲ್ಲೋ ಕರೆದೊಯ್ಯತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ. ‘‘ನಿಮ್ಮನ್ನ ನೋಡಿಕೊಳ್ಳುತ್ತೇವೆ’’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಕೌನ್ಸಿಲ್ ಹಾಲ್ ಒಳಗೆ ಹೇಳಿದ್ದರು ಎಂದು ಸಿಟಿ ರವಿ ಆರೋಪಿಸಿದರು.
ನನ್ಙನ್ನು ಪೊಲಿಸರು ನಿಗೂಢ ಜಾಗಕ್ಕೆ ಕರೆತಂದು ನಿಲ್ಲಿಸಿದ್ದಲ್ಲದೆ ದೂರ ಹೋಗಿ ಮಾತನಾಡುತ್ತಾ ಇದ್ದರು. ಖಾನಾಪುರದಲ್ಲಿ ನನಗೆ ಹೊಡೆದರು, ತಲೆಯಲ್ಲಿ ರಕ್ತ ಬರುತ್ತಿತ್ತು ಎಂದು ಜಡ್ಜ್ ಬಳಿ ಸಿಟಿ ರವಿ ಹೇಳಿದರು. ಇದೇ ವೇಳೆ, ‘ಯಾರು ಹೊಡೆದಿದ್ದಾರೆ’ ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ರವಿ, ಯಾರು ಹೊಡೆದರು ಎಂದು ಗೊತ್ತಾಗಲಿಲ್ಲ. ಪೊಲಿಸರೇ ಹೊಡೆದಿರಬಹುದು, ಅವರೇ ಎತ್ತಿಕೊಂಡು ಹೋದರು ಎಂದರು.