ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಉದ್ದೇಶದಿಂದ ವಿಪಕ್ಷಗಳು ರಚಿಸಿರುವ ಇಂಡಿಯಾ ಅಲಯನ್ಸ್ನ ಮೂರನೇ ಸಭೆ ಇಂದು ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಎರಡು ಸಭೆಗಳನ್ನು ನಡೆಸಿರುವ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಇಂದಿನಿಂದ ಎರಡು ದಿನಗಳ ಕಾಲ ಮುಂಬೈನಲ್ಲಿ ಮೂರನೇ ಬಾರಿಗೆ ಸಭೆ ನಡೆಸುತ್ತಿವೆ.
ಎರಡು ದಿನಗಳ ಸಭೆಯಲ್ಲಿ, ಮೈತ್ರಿ ಪಕ್ಷಗಳ ಅಧ್ಯಕ್ಷರು, ಪ್ರಧಾನಿ ಅಭ್ಯರ್ಥಿ ಹಾಗೂ ಸಂಚಾಲಕ ಹುದ್ದೆಗಳಿಗೆ ನಾಯಕರನ್ನು ಆಯ್ಕೆ ಮಾಡಲಿದ್ದಾರೆ. ಅಲ್ಲದೇ ಸಾರ್ವತ್ರಿಕ ಚುನಾವಣಾ ಪ್ರಚಾರ ಕಾರ್ಯತಂತ್ರ ಅಂತಿಮಗೊಳ್ಳಲಿದೆ. ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ʻಲೋಗೋʼ ಕೂಡ ಅನಾವರಣಗೊಳ್ಳಲಿದೆ. ಇಂದಿನ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಶರದ್ ಪವಾರ್ ಸೇರಿದಂತೆ 26 ಪಕ್ಷಗಳ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.
ಈಗಿರುವ 26 ಪಕ್ಷಗಳೊಂದಿಗೆ ಮೈತ್ರಿಕೂಟದ ಭಾಗವಾಗಿರದ ಇತರ ಕೆಲವು ಪಕ್ಷಗಳು ಒಕ್ಕೂಟವನ್ನು ಸೇರುವ ಸಾಧ್ಯತೆಯಿದೆ. ಮತ್ತೊಂದೆಡೆ, ಬೆಂಗಳೂರು ಸಭೆಯಲ್ಲಿ ಮೈತ್ರಿಕೂಟದ ಸಂಚಾಲಕ ಎಂದು ಘೋಷಿಸದಿದ್ದಕ್ಕೆ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ.