ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಗಾಂಧಿನಗರ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಲೋಕಸಭಾ ಚುನಾವಣೆಯ ಪ್ರಚಾರವನ್ನು ಶುಕ್ರವಾರ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ‘ಈ ಚುನಾವಣೆಯು ಬಿಜೆಪಿಗಾಗಿ ಅಲ್ಲ, ಭಾರತಕ್ಕಾಗಿ’ . ಚುನಾವಣಾ ಪ್ರಚಾರದ ವೇಳೆ ಕ್ಷೇತ್ರದ ಪ್ರತಿಯೊಬ್ಬ ಮತದಾರನನ್ನೂ ಭೇಟಿ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜತೆಗೂಡಿ ಇಲ್ಲಿನ ಗುರುಕುಲ ರಸ್ತೆಯ ಹನುಮಾನ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಅವರು ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ತಮ್ಮ ರಾಜಕೀಯದಲ್ಲಿನ ಆರಂಭದ ದಿನಗಳನ್ನು ಮೆಲುಕು ಹಾಕಿದ ಅಮಿತ್ ಶಾ, 30 ವರ್ಷದ ಹಿಂದೆ ತಾವು ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದಾಗ ಇದೇ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾಗಿ ತಿಳಿಸಿದರು.
‘1500ಕ್ಕೂ ಹೆಚ್ಚು ಪಕ್ಷಗಳಿರುವ ದೇಶದಲ್ಲಿ ಕರಪತ್ರ ಹಂಚುತ್ತಿದ್ದ, ಪಕ್ಷದ ಕಾರ್ಯಕ್ರಮಗಳಿಗೆ ಪರದೆ ಕಟ್ಟುತ್ತಿದ್ದ ನನ್ನಂಥ ಸಣ್ಣ ಕಾರ್ಯಕರ್ತನನ್ನು ಕೇಂದ್ರ ಸಚಿವನನ್ನಾಗಿಸಿದ, ಪಕ್ಷದ ಅಧ್ಯಕ್ಷನನ್ನಾಗಿಸಿದ ಪಕ್ಷ ಬಿಜೆಪಿ ಒಂದೇ. ಈ ಪಕ್ಷವು ಬಡ ಕುಟುಂಬದ ಒಬ್ಬ ಸಾಮಾನ್ಯ ಚಹಾ ಮಾರುವವನನ್ನು ದೇಶದ ಪ್ರಧಾನಿಯನ್ನಾಗಿ, ಜಾಗತಿಕ ನಾಯಕನನ್ನಾಗಿ ಮಾಡಿದೆ’ ಎಂದು ಅಮಿತ್ ಶಾ ಹೇಳಿದರು.