ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ವಿವಾದಿತ ಸ್ಥಳವನ್ನು ಸರಸ್ವತಿ ದೇವಿಯ ದೇವಾಲಯ ಎಂದು ಘೋಷಿಸಿರುವ ತೀರ್ಪು ದೇಶದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ತೀರ್ಪಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಇದು ಬಾಬ್ರಿ ಮಸೀದಿ ತೀರ್ಪಿನಂತೆಯೇ ಕಾಣುತ್ತದೆ ಎಂದು ಹೇಳಿದ್ದಾರೆ.
ತೀರ್ಪಿನ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಓವೈಸಿ, ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸುತ್ತದೆ ಎಂಬ ವಿಶ್ವಾಸ ಇದೆ. ಭೋಜಶಾಲಾ ತೀರ್ಪು ಮತ್ತು ಬಾಬ್ರಿ ಮಸೀದಿ ತೀರ್ಪಿನ ನಡುವೆ ಸ್ಪಷ್ಟ ಹೋಲಿಕೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:
ಇದೇ ವೇಳೆ, ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಪರ ವಾದಿಸುತ್ತಿರುವ ಧಾರ್ ನಗರದ ಖಾಜಿ ವಕಾರ್ ಸಾದಿಕ್ ಕೂಡ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ನಮ್ಮ ವಿರುದ್ಧದ ತೀರ್ಪಿನ ಕಾನೂನು ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್, ಧಾರ್ ಜಿಲ್ಲೆಯ ಭೋಜಶಾಲಾ ಸಂಕೀರ್ಣವು ಐತಿಹಾಸಿಕವಾಗಿ ಸರಸ್ವತಿ ದೇವಿಗೆ ಮೀಸಲಾದ ದೇವಾಲಯ ಎಂದು ಹೇಳಿ, ಮಸೀದಿಗಾಗಿ ಪರ್ಯಾಯ ಜಾಗ ಕೋರಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು.



