ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಇಂದು ವಲಸೆ ಮತ್ತು ವಿದೇಶಿಯರ ಮಸೂದೆ 2025 ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಯಾರೂ ಬೇಕಾದ್ರೂ ಬಂದು ಇಲ್ಲಿರಲು ಈ ದೇಶ ಧರ್ಮಶಾಲೆಯಲ್ಲ. ದೇಶದ ಭದ್ರತೆಗಾಗಿ ಯಾರು ಭಾರತಕ್ಕೆ ಬರುತ್ತಾರೆ ಮತ್ತು ಎಷ್ಟು ಕಾಲ ಇರುತ್ತಾರೆ ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕೆ ಇದೆ ಎಂದು ಹೇಳಿದ್ದಾರೆ.
ದೇಶದ ಹಲವು ಸಮಸ್ಯೆಗಳಿಗೆ ಈ ಮಸೂದೆ ಸಂಬಂಧಿಸಿದೆ. ಇದರ ಮೂಲಕ ಭಾರತಕ್ಕೆ ಬರುವ ವಿದೇಶಿಯರ ವಿವರಗಳನ್ನು ದಾಖಲಿಸಲಾಗುವುದು. ಇದು ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಸಹಾಯಕವಾಗಲಿದೆ’ ಎಂದು ಭರವಸೆ ನೀಡಿದರು.
ದೇಶದ ಆರ್ಥಿಕತೆ, ಉತ್ಪಾದನೆ, ವ್ಯಾಪಾರ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ ಭಾರತವನ್ನು ವಿಶ್ವದಲ್ಲಿ ಅಗ್ರಗಣ್ಯವಾಗಿಸಲು ಈ ಮಸೂದೆ ಮಹತ್ವದ್ದು ಎಂದು ಅವರು ತಿಳಿಸಿದರು.
ಕುರಿತು ಮಾತನಾಡಿದ ಬಗ್ಗೆ ಅಮಿತ್ ಶಾ , ಪಾರ್ಸಿಗಳು ಭಾರತಕ್ಕೆ ಆಶ್ರಯ ಪಡೆದ ಇತಿಹಾಸವಿದೆ ಮತ್ತು ಇಂದಿಗೂ ಅವರು ಇಲ್ಲಿ ಸುರಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ, ಬಿಜೆಪಿ ಸರ್ಕಾರವು ನೆರೆ ದೇಶಗಳಿಂದ ಕಿರುಕುಳಕ್ಕೊಳಗಾದ ಆರು ಸಮುದಾಯಗಳಿಗೆ ಸಿಎಎ ಮೂಲಕ ಆಶ್ರಯ ನೀಡಿದೆ ಎಂದು ಹೇಳಿದರು.
ಭಾರತ ಉತ್ಪಾದನಾ ಕೇಂದ್ರವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಇಂತಹ ಸಂದರ್ಭದಲ್ಲಿ ವಿದೇಶಿಯರು ಇಲ್ಲಿಗೆ ಬರುವುದು ಸಹಜ. ಆದರೆ ದೇಶದ ವ್ಯವಸ್ಥೆಗೆ ಕೊಡುಗೆ ನೀಡಲು ಬರುವವರಿಗೆ ಸ್ವಾಗತವಿದೆ. ಆದರೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳು ಅಶಾಂತಿ ಸೃಷ್ಟಿಸಲು ಬಂದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಮಸೂದೆಯ ಮೂಲಕ ದೇಶದ ಭದ್ರತೆಯನ್ನು ಖಚಿತಪಡಿಸುವುದು, ವಿದೇಶಿಯರ ಪ್ರವೇಶವನ್ನು ನಿಯಂತ್ರಿಸುವುದು ಮತ್ತು ಭಾರತದ ಅಭಿವೃದ್ಧಿಗೆ ಬಲ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.