April 30, 2026
Thursday, April 30, 2026
spot_img

ಪೇರಳೆ ಹಣ್ಣು ಕಿತ್ತಿದ್ದಾಳೆ ಅಂತ ಹೀಗಾ ಮಾಡೋದು: ನಿವೃತ್ತ ಸೇನಾ ಅಧಿಕಾರಿಯ ಕೆಲಸಕ್ಕೆ ಛೀ.. ಥೂ.. ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಮಾನವೀಯತೆಯನ್ನು ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೊರಗಿನ ಮರದಿಂದ ಪೇರಳೆ ಹಣ್ಣು ಕಿತ್ತಿದ್ದಾಳೆ ಎಂಬ ಆರೋಪದ ಮೇರೆಗೆ ಅಪ್ರಾಪ್ತ ಬಾಲಕಿಗೆ ಕಠಿಣ ಶಿಕ್ಷೆ ನೀಡಿದ ಪ್ರಕರಣ ಸಂಚಲನ ಮೂಡಿಸಿದೆ. ಈ ಸಂಬಂಧ ನಿವೃತ್ತ ಸೇನಾ ಅಧಿಕಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಾಹಿತಿಯ ಪ್ರಕಾರ, ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದ ಬಾಲಕಿ ಆರೋಪಿಯ ಮನೆಯ ಸಮೀಪದ ಮರದಿಂದ ಪೇರಳೆ ಹಣ್ಣುಗಳನ್ನು ಕಿತ್ತಿದ್ದಾಳೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೋಪಗೊಂಡ ನಿವೃತ್ತ ಸೇನಾ ಅಧಿಕಾರಿ ಆಕೆಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಸರಪಳಿಯಿಂದ ಮೆಟ್ಟಿಲುಗಳಿಗೆ ಕಟ್ಟಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:

ಘಟನೆಯ ದೃಶ್ಯವನ್ನು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಯುವಕನೊಬ್ಬ ಮೊಬೈಲ್‌ನಲ್ಲಿ ದಾಖಲಿಸಿದ್ದಾನೆ. ಬಳಿಕ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆಕ್ರೋಶಕ್ಕೆ ಕಾರಣವಾಯಿತು. ವಿಡಿಯೋದಲ್ಲಿ ಬಾಲಕಿ ಅಳುತ್ತಾ ತನ್ನನ್ನು ರಕ್ಷಿಸಲು ಬೇಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.

ಈ ಕುರಿತು ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಪೊಲೀಸರು ಬಾಲಕಿಯ ಕುಟುಂಬದ ಹೇಳಿಕೆಗಳನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಟುಂಬದ ಬಳಿ ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !