ಈ ಬಾರಿ ‘ರಾಷ್ಟ್ರ ಲಾಂಛನ ವಿರೂಪ’ ಕ್ಯಾತೆ ತೆಗಿದ ಕಾಂಗ್ರೆಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ಆಪಾದನೆ ಮಾಡಿವೆ.

ನಿನ್ನೆ ಕೇಂದ್ರ ಸರಕಾರದ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ನಿರ್ಮಾಣ ಗೊಂಡಿರುವ ಸಂಸತ್ತಿನ ಹೊಸ ಸಂಕೀರ್ಣದ ಛಾವಣಿಯಲ್ಲಿ ತಲೆಯೆತ್ತಿದ ರಾಷ್ಟ್ರ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು. ಇದೀಗ ಈ ರಾಷ್ಟ್ರ ಲಾಂಛನ ವಿರುದ್ಧ ವಿಪಕ್ಷಗಳು ವಿರೋಧವ್ಯಕ್ತಪಡಿಸುತ್ತಿದ್ದಾರೆ.

ಸುಂದರ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಆಕ್ರಮಣಕಾರಿ ಭಂಗಿ ಹೊಂದಿರುವ ಸಿಂಹಗಳ ರೀತಿಯಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ: ಅಧೀರ್‌ ರಂಜನ್‌ ಚೌಧರಿ
‘ಮೋದಿ ಅವರೇ ದಯವಿಟ್ಟು ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ. ಇದು ಪ್ರಸಿದ್ಧ ಸಾರಾನಾಥದಲ್ಲಿದ್ದ ಸಿಂಹದ ಲಾಂಛನಗಳೇ ಅಥವಾ ಗಿರ್‌ ಸಿಂಹದ ವಿಕೃತ ಆವೃತ್ತಿಯೇ? ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರಿಪಡಿಸಿ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಕ್ಷಣವೇ ಬದಲಿಸಿ : ಜವಾಹರ್‌ ಸಿರ್ಕಾರ್‌
ನಮ್ಮ ರಾಷ್ಟ್ರೀಯ ಚಿಹ್ನೆ, ಭವ್ಯ ಅಶೋಕನ ಸಿಂಹಗಳಿಗೆ ಅವಮಾನವಾಗಿದೆ. ಮೂಲ ಸಾರಾನಾಥದ ಸಿಂಹದ ಚಿತ್ರ ಎಡಭಾಗದಲ್ಲಿದೆ, ಆಕರ್ಷಕವಾಗಿದೆ, ಪ್ರಾಮಾಣಿಕವಾಗಿ ಆತ್ಮವಿಶ್ವಾಸವಿದೆ. ಬಲಭಾಗದಲ್ಲಿದ್ದು ಮೋದಿಯವರ ಆವೃತ್ತಿಯಾಗಿದೆ, ಹೊಸ ಸಂಸತ್ತಿನ ಕಟ್ಟಡದ ಮೇಲೆ ಇರಿಸಲಾಗಿದೆ .ಘರ್ಜನೆ ಮಾಡುತ್ತಿರುವ, ಅನಗತ್ಯವಾಗಿ ಆಕ್ರಮಣಕಾರಿಯಾಗಿ ಅಸಮಂಜಸವಾಗಿರುವ ನಾಚಿಕೆಗೇಡಿನ ಆವೃತ್ತಿ ಇದಾಗಿದೆ. ಇದನ್ನು ತಕ್ಷಣವೇ ಬದಲಿಸಿ ಎಂದು ತೃಣಮೂಲ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಜವಾಹರ್‌ ಸಿರ್ಕಾರ್‌ ಟ್ವಿಟರ್‌ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಲಾಂಛನಕ್ಕೆ ಮಾಡಿರುವ ಅತಿದೊಡ್ಡ ಅವಮಾನ: ಜೈರಾಮ್‌ ರಮೇಶ್‌
ಇದು ದೇಶದ ರಾಷ್ಟ್ರ ಲಾಂಛನಕ್ಕೆ ಮಾಡಿರುವ ಅತಿದೊಡ್ಡ ಅವಮಾನ ಎಂದು ಹೇಳಿದ್ದಾರೆ.’ಸಾರನಾಥದಲ್ಲಿರುವ ಅಶೋಕನ ಸ್ತಂಭದ ಮೇಲಿರುವ ಸಿಂಹಗಳ ಸ್ವರೂಪ ಸಂಪೂರ್ಣವಾಗಿ ಬದಲಾಯಿಸುವುದು ಭಾರತದ ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್‌ ಬರೆದುಕೊಂಡಿದ್ದಾರೆ.

ಸಾರಾನಾಥ ಸಿಂಹ ಟ್ರೆಂಡ್‌
ಟ್ವಿಟರ್‌ನಲ್ಲಿ ಹಾಗೂ ಸೋಷಿಯಲ್‌ ಮೀಡಿಯಾದಲ್ಲಿ ಕರ್ನಾಟಕದ ವಿಧಾನಸೌಧದ ಮೇಲಿರುವ ರಾಷ್ಟ್ರಲಾಂಛನ ಹಾಗೂ ಹೊಸ ಸಂಸತ್‌ ಭವನದ ಮೇಲಿರುವ ರಾಷ್ಟ್ರಲಾಂಛನವನ್ನು ಶೇರ್‌ ಮಾಡಿಕೊಂಡಿದ್ದ ನೆಟಿಜನ್ಸ್‌ಗಳು ಆಗಿರುವ ಬದಲಾವಣೆಯ ಬಗ್ಗೆ ಗಮನಸೆಳೆದಿದ್ದರು. ಕಳೆದ 70 ವರ್ಷಗಳಲ್ಲಿ ರಾಷ್ಟ್ರಲಾಂಛನದ ಸಿಂಹಗಳು ಈ ರೀತಿ ಇದ್ದರೆ, ಕಳೆದ 8 ವರ್ಷಗಳಲ್ಲಿ ಸಿಂಹ ಈ ರೀತಿ ಇದೆ ಎಂದು ಬರೆದುಕೊಂಡಿದ್ದರು. ಕರ್ನಾಟಕದ ವಿಧಾನಸೌಧದ ಮೇಲಿದ್ದ ಸಿಂಹಗಳು ಬಾಯಿಮುಚ್ಚಿಕೊಂಡಿದ್ದರೆ, ಹೊಸ ಸಂಸತ್‌ ಭವನದ ಲಾಂಛನದ ಸಿಂಹಗಳು ಘರ್ಜನೆ ಮಾಡುವಂತೆ ಇದ್ದವು. ಆದರೆ, ಹೊಸ ಸಂಸತ್‌ ಭವನದ ಲಾಂಛನ ಮೂಲ ಸಾರಾನಾಥದ ಸ್ತಂಭದಲ್ಲಿರ ಲಾಂಛನವನ್ನು ಹೋಲುತ್ತಿದೆ.

ಕಾಂಗ್ರೆಸ್ ಗೆ ಬಿಜೆಪಿ ಟೀಕೆ
ಇದರ ನಡುವೆ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದು, ಸಂವಿಧಾನವನ್ನು ಬದಲಾಯಿಸಿದ, ಸಂವಿಧಾನವನ್ನು ಮುರಿದ ವ್ಯಕ್ತಿಗಳು ಅಶೋಕ ಸ್ತಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಳಿ ದೇವಿಗೆ ಗೌರವ ನೀಡಲು ಗೊತ್ತಿಲ್ಲದವರು, ಅಶೋಕ ಸ್ತಂಭದಕ್ಕೆ ಗೌರವ ನೀಡುತ್ತಾರೆಯೇ. ಕಲಾವಿದನ ಕಡೆಯಿಂದಾಗಲಿ ಸರ್ಕಾರದ ಕಡೆಯಿಂದಾಗಲಿ ಯಾವುದೇ ತಪ್ಪುಗಳಾಗಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಕೂಡ ಸ್ಪಷ್ಟನೆ ನೀಡಿದ್ದಾರೆ.
ಮೂಲ ಸಾರಾನಾಥದ ಲಾಂಛನವು 1.6 ಮೀಟರ್‌ ಎತ್ತರವಾಗಿದೆ. ಆದರೆ, ಸಂಸತ್ತಿನ ಕಟ್ಟಡದ ಮೇಲಿನ ಲಾಂಛನವು 6.5 ಮೀಟರ್‌ ಎತ್ತರದಲ್ಲಿ ದೊಡ್ಡದಾಗಿದೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಅವಿತಿರುತ್ತದೆ. ಶಾಂತ ಹಾಗೂ ಕೋಪದ ವಿಚಾರ ಕೂಡ ಇದೇ ರೀತಿಯದ್ದಾಗಿದೆ ಎಂದು ಸಾರಾನಾಥದ ಮೂಲ ಸ್ತಂಭದ ಚಿತ್ರದೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!