ಹೊಸದಿಗಂತ ವರದಿ,ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿ ಮತ್ತು ನಿರುದ್ಯೋಗಿಗಳಲ್ಲಿ ಉದ್ಯೋಗದ ಕೌಶಲ್ಯ ಹೆಚ್ಚಿಸಲು ಪ್ರದೇಶದಲ್ಲಿ “ಕೌಶಲ್ಯ ವಿಶ್ವವಿದ್ಯಾಲಯ” ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು 371ಜೆ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪಾರಾಮರ್ಶಿಸುವ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರು, ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದರು.
ಶುಕ್ರವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ. ಸಭಾಂಗಣದಲ್ಲಿ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನಗಳಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪಾರಾಮರ್ಶಿಸುವ ಸಚಿವ ಸಂಪುಟದ ಉಪ ಸಮಿತಿಯ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಭಾಗದಲ್ಲಿ ನಿರುದ್ಯೋಗಿ ಅಭ್ಯರ್ಥಿಗಳಲ್ಲಿ ಕೌಶಲ್ಯ ವೃದ್ಧಿಸುವುದು ಮತ್ತು ಉದ್ಯೋಗ ಕಲ್ಪಿಸುವುದು ಅತೀ ಅವಶ್ಯಕತೆವಾಗಿದೆ. ಕೌಶಲ್ಯ ವಿ.ವಿ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳನ್ನು ಸಮಿತಿಯೂ ಭೇಟಿ ಮಾಡಿ ಚರ್ಚಿಸಲು ನಿರ್ಧರಿಸಿದೆ ಎಂದರು.
ಕಲ್ಯಾಣ ಕರ್ನಾಟPಕ್ಕೆ ಅಂಟಿಕೊಂಡಿರುವÀ ಹಿಂದುಳಿದ ಹಣೆಪಟ್ಟಿ ತೆಗೆಯಲು ಈ ಭಾಗಕ್ಕೆ ಸುಮಾರು 5500 ಕೋಟಿ ರೂ. ಅನುದಾನ ನೀಡುವಂತೆ ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರದ ಪ್ರತಿಕ್ರಿಯೆ ನಿರೀಕ್ಷಿಸಿದ್ದೇವೆ ಎಂದರು.
ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 2013-14ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ 8,878.33 ಕೋಟಿ ರೂ. ಹಂಚಿಕೆಯಾಗಿ 6,597.76 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 6,480.67 ಕೋಟಿ ರೂ. ಪ್ರದೇಶದ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ 25,469 ಕಾಮಗಾರಿಗಳ ಪೈಕಿ 20,697 ಪೂರ್ಣಗೊಳಿಸಿ ಶೇ.81ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಕ್ರಮವಾಗಿ 2,250.40 ಕೋಟಿ ರೂ. ಮತ್ತು 610.27 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ವಿನಿಯೋಗಿಸಿದರೂ ಕಳೆದ 8 ವರ್ಷದಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದ ಕಳವಳ ವ್ಯಕ್ತಪಡಿಸಿದ ಅವರು ಮುಂದಿನ ದಿನದಲ್ಲಿ ಮೆಡಿಕಲ್, ಇಂಜಿನೀಯರಿಂಗ್, ಸ್ಕಿಲ್ ಹೀಗೆ ವಿವಿಧ ಕಾಲೇಜುಗಳನ್ನೊಳಗೊಂಡ “ಏಜುಕೇಷನ್ ಹಬ್” ಮಾಡಲು ನಿರ್ಧರಿಸಲಾಗಿದೆ ಎಂದರು.
ಉದ್ಯೋಗದಲ್ಲಿ ಮೀಸಲಾತಿ ಕುರಿತಂತೆ ದಿ.6-6-2020ರ ಸರ್ಕಾರದ ಸುತ್ತೋಲೆಯಿಂದ ಪ್ರದೇಶದ ಅಬ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಹಿಂಪಡೆಯಬೇಕೆಂಬ ಇಲ್ಲಿನ ಜನಪ್ರತಿನಿಧಿಗಳು ಮನವಿಯಂತೆ ಶೀಘ್ರವೆ ಕಾನೂನು ಮತ್ತು ಡಿ.ಪಿ.ಎ.ಆರ್. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರದೇಶದ ಸ್ಥಳೀಯರಿಗೆ ನೆರವಾಗುವಂತಹ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.