ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ವಿಜಯವಾಡ ಗನ್ನವರಂ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ನಿಲ್ದಾಣದಲ್ಲಿದ್ದ ಏರ್ ಇಂಡಿಯಾ 320 ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿದ್ದರು. ತಕ್ಷಣ ಎಚ್ಚೆತ್ತ ವಿಮಾನ ನಿಲ್ದಾಣಾಧಿಕಾರಿಗಳು ರಾತ್ರಿ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ತಡೆದರು. ಬಾಂಬ್ ಸ್ಕ್ವಾಡ್ನೊಂದಿಗೆ ತಪಾಸಣೆ ನಡೆಸಲಾಯಿತು. ಈ ವೇಳೆ ಯಾವೊಬ್ಬ ಪ್ರಯಾಣಿಕನನ್ನೂ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು.
ಎಲ್ಲಿಯೂ ಬಾಂಬ್ ಪತ್ತೆಯಾಗದ ಕಾರಣ ಪ್ರಯಾಣಿಕರು, ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಾಂಬ್ ಬೆದರಿಕೆ ಕರೆಯಿಂದಾಗಿ ವಿಜಯವಾಡದಿಂದ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ 320 ವಿಮಾನ ಮೂರು ಗಂಟೆಗಳ ಕಾಲ ನಿಂತಲ್ಲೇ ನಿಂತಿತ್ತು. ಏರ್ ಇಂಡಿಯಾ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಇದು ಹುಸಿ ಕರೆ ಎಂದು ದೃಢಪಡಿಸಿದ ಬಳಿಕ ಭಯದ ವಾತಾವರಣದಿಂದ ಹೊರಬಂದರು.
ರಾತ್ರಿ 8.30ಕ್ಕೆ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮೂರೂವರೆ ಗಂಟೆ ತಡವಾಗಿ ಹೊರಟಿತ್ತು. ಬೆದರಿಕೆ ಕರೆ ಎಲ್ಲಿಂದ ಬಂತು? ಯಾರು ಮಾಡಿದರು? ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.