ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನುಭೇಟಿಯಾಗಿದ್ದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ಹಲವು ಬೆದರಿಕೆಗಳು ಬರುತ್ತಿದ್ದು, ಈ ಹಿನ್ನಲೆ ವೈ ಪ್ಲಸ್ (ವೈ +) ಶ್ರೇಣಿ ಭದ್ರತೆಯನ್ನು ನೀಡಲಾಗಿದೆ.
ಸೆಪ್ಟೆಂಬರ್ 22ರಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಆಹ್ವಾನದ ಮೇರೆ ಉತ್ತರ ದೆಹಲಿಯ ಮದರಸಾ ತಜ್ವೀದುಲ್ ಕುರಾನ್ಗೆ ಮೋಹನ್ ಭಾಗವತ್ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ಭಾಗವತ್ ಅವರನ್ನು ರಾಷ್ಟ್ರಪಿತ ಮತ್ತು ರಾಷ್ಟ್ರಋಷಿ ಎಂದು ಇಲ್ಯಾಸಿ ಬಣ್ಣಿಸಿದ್ದರು. ಈ ರೀತಿ ಕರೆದ ಬಳಿಕ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮಾಮ್ ಉಮರ್ ಅಹ್ಮದ್ ತಿಳಿಸಿದ್ದಾರೆ.
ಇಂಗ್ಲೆಂಡ್ನಂತೆ ದುಬೈ ಮತ್ತು ಕೋಲ್ಕತ್ತಾದಿಂದ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬಂದಿವೆ ಎಂದು ತಿಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಜೊತೆಗೆ ಈ ಬಗ್ಗೆ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿದೆ.
ಗೃಹ ವ್ಯವಹಾರಗಳ ಸಚಿವಾಲಯವು ನೀಡಿರುವ ವೈ ಪ್ಲಸ್ ಶ್ರೇಣಿ ಭದ್ರತೆಗಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ತಿಳಿಸಿದ್ದಾರೆ.