ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಹೊಸ ಶಾಸಕರಿಗೆ ಮೂರು ದಿನಗಳ ಕಾಲ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶೇ.70ರಷ್ಟು ಹೊಸ ಶಾಸಕರು ಈ ಬಾರಿಯ ಸದನದಲ್ಲಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿನ ನಿಯಮಗಳೇನು?. ಅದನ್ನು ಹೇಗೆ ಪಾಲನೆ ಮಾಡಬೇಕು, ವಿಧಾನಸಭೆಯ ಚರ್ಚೆಯಲ್ಲಿ ಗೌರವ ಹೆಚ್ಚಿಸಿಕೊಂಡು ಜನಸಾಮಾನ್ಯರಿಗೆ ತಮ್ಮ ಬಗ್ಗೆ ಕಾಳಜಿ ಇದೆ ಎಂಬ ಭಾವನೆಯನ್ನು ಹೇಗೆ ಮೂಡಿಸಬೇಕು ಎಂಬ ವಿಚಾರಗಳ ಬಗ್ಗೆ ಮೂರು ದಿನಗಳ ಟ್ರೈನಿಂಗ್ ಕ್ಯಾಂಪ್ನ್ನು ನೂತನ ಶಾಸಕರಿಗೆ ನೀಡಲಾಗುವುದು ಎಂದು ಹೇಳಿದರು.
ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಹೆಚ್ಚಿನ ಅವಕಾಶಗಳನ್ನು ಯುವಕರಿಗೆ ಮತ್ತು ಹೊಸ ಮುಖಗಳಿಗೆ ನೀಡಲು ಪ್ರಯತ್ನ ಮಾಡುತ್ತೇನೆ. ಸಭಾಧ್ಯಕ್ಷನಾದರೂ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುತ್ತೇನೆ. ಕ್ಷೇತ್ರ ಮತ್ತು ಪಕ್ಷದ ಕಾರ್ಯಕರ್ತರ ನಿಕಟ ಸಂಬಂಧ ಇರಿಸಿಕೊಳ್ಳುತ್ತೇನೆ. ಸ್ಪೀಕರ್ ಸ್ಥಾನದ ಘನತೆ ಹೆಚ್ಚಿಸಿ ಕ್ಷೇತ್ರವನ್ನು ಮಾದರಿ ಯಾಗಿಸುತ್ತೇನೆ. ಕರ್ನಾಟಕ ರಾಜ್ಯದ ವಿಧಾನಸಭಾ ಸಭಾಧ್ಯಕ್ಷ ಸ್ಥಾನ ಗೌರವ ಇರುವ ಸ್ಥಾನವಾಗಿದ್ದು, ಇದರ ಗೌರವ ಉಳಿಸುವ ಕಾರ್ಯ ಮಾಡುತ್ತೇನೆ ಮತ್ತು ಜಿಲ್ಲೆಗೆ ಗೌರವ ತರುತ್ತೇನೆ ಎಂದರು.
ಸ್ಪೀಕರ್ ಮಾಡಿರುವ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಹಲವಾರು ಜನರು ಇದ್ದರೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ವಯಸ್ಸಿನಲ್ಲಿ ಕಿರಿಯ ಇರಬಹುದು. ಆದರೆ ಅನುಭವದಲ್ಲಿ ಹಿರಿಯನಿದ್ದೇನೆ. ಚಿಕ್ಕಂದಿನಿಂದಲೇ ಜನರೊಂದಿಗೆ ಒಡನಾಟ ಇದೆ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಸೀಮಿತವಾಗಿರುತ್ತಿದ್ದೆ. ಇದೀಗ 32 ಇಲಾಖೆಯ ಮಂತ್ರಿಗಳು ನನ್ನ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಯು. ಟಿ. ಖಾದರ್ ಹೇಳಿದರು.