ಹೊಸದಿಗಂತ ವರದಿ, ರಾಯಚೂರು:
ಹನುಮ ಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ಮಡಿ ನೀರು ತರಲು ಹೊರಟಿದ್ದ ಭಕ್ತರ ಮೇಲೆ ಹಿಂದಿನಿoದ ಮಹೆಂದ್ರಾ ಪಿಕಪ್ ವಾಹನ ಹರಿದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಬಳಿ ಮಂಗಳವಾರ ನಸುಕಿನ ಜಾವ ಜರುಗಿದೆ.
ಮೃತ ದುರ್ದೈವಿಗಳನ್ನು ಅಯ್ಯನಗೌಡ (೨೮), ಮಹೇಶ (೨೨), ಉದಯಕುಮಾರ (೨೮) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇನ್ನು ಇಬ್ಬರು ತೀರ್ವವಾಗಿ ಗಾಯಗೊಂಡಿದ್ದರು ಅವರನ್ನು ರಿಮ್ಸ್ ಆಸ್ಪತ್ರಗೆ ದಾಖಲಿಸಲಾಗಿದೆ.
ಘಟನೆ ಜರುಗಿದ ನಂತರ ಶಕ್ತಿನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಈ ಮೂವರು ಮೃತಪಟ್ಟಿದ್ದಾರೆ. ತೆಲಂಗಾಣಾ ರಾಜ್ಯದ ಜಡಚರ್ಲಾದ ವಾಹನ ಇದಾಗಿದ್ದು. ಕೋಳಿ ತುಂಬಿಕೊoಡು ರಾಯಚೂರು ಕಡೆಗೆ ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷದಿಂದ ಹಾಗೂ ವೇಗವಾಗಿ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ.
ಘಟನೆ ಜರುಗಿದ ತಕ್ಷಣ ಚಾಲಕ ಮಧುಸೂದನ ಗೌಡ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿ ಆಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಅವನನ್ನು ಬೆನ್ನತ್ತಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಶಕ್ತಿ ನಗರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.