ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬರನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜೈಪುರದ ಖೋಹ್ ನಗೋರಿಯನ್ ಪೊಲೀಸ್ ಠಾಣಾ ವ್ಯಾಪ್ತಿಯ ಜಗತ್ಪುರ ಸಿಬಿಐ ಗೇಟ್ ಬಳಿ ನಡೆದಿದೆ.
ಹರಿದ್ವಾರ ಮೇಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 15 ವರ್ಷದ ಬಾಲಕಿ ನಿಶಾ ಮತ್ತು ಆಕೆಯ ತಂದೆ ಸುಮಿತ್ ಮತ್ತು ಚಿಕ್ಕಪ್ಪ ಗಣೇಶ್ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಸಹೋದರ ಸುಮಿತ್ ಸಿಬಿಐ ಗೇಟ್ ಬಳಿ ಬಂದಿದ್ದಾನೆ. ಸುದ್ದಿ ತಿಳಿದು ಈತನನ್ನು ರಕ್ಷಿಸುವ ಸಲುವಾಗಿ ಗಣೇಶ್ ಮತ್ತು ನಿಶಾ ಕೂಡ ಇಲ್ಲಿಗೆ ಬಂದಿದ್ದಾರೆ. ಈ ವೇಳೆ ಸುಮಿತ್ ಬರುತ್ತಿದ್ದ ರೈಲಿಗೆ ಜಿಗಿದಿದ್ದು, ಈತನನ್ನು ರಕ್ಷಿಸಲೆಂದು ಹಳಿಗೆ ಇಳಿದ ಗಣೇಶ್ ಮತ್ತು ನಿಶಾ ಸಹ ರೈಲಿಗೆ ಸಿಲುಕಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ರೈಲು ಮೂವರಿಗೂ ರಭಸವಾಗಿ ಗುದ್ದಿ ಮುಂದೆ ಸಾಗಿದೆ. ಪರಿಣಾಮ ಮೂವರು ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಂತಹದ್ದೊಂದು ಘಟನೆ ನಡೆದಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಯಿತು. ಸದ್ಯ ಮೂವರ ಶವಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಮಿತ್, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಹಳಿಯತ್ತ ಬಂದಿದ್ದು, ರೈಲಿಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಆತನನ್ನು ಹುಡುಕುತ್ತಾ ಆತನ ಸಹೋದರ ಗಣೇಶ್ ಮತ್ತು ಮಗಳು ನಿಶಾ ಅಲ್ಲಿಗೆ ಬಂದಿದ್ದಾರೆ.
ಪುತ್ರಿಯೊಂದಿಗೆ ಸಹೋದರ ಬರುವುದಕ್ಕೂ ರೈಲು ಸಹ ಬಂದಿದ್ದು ಸುಮಿತ್, ಹಳಿ ಮೇಲೆ ಹಾರಿದ್ದಾನೆ. ಅದೇ ಸಮಯದಲ್ಲಿ ಆತನನ್ನು ರಕ್ಷಿಸಲೆಂದು ಗಣೇಶ್ ಮತ್ತು ನಿಶಾ ಮುಂದಾಗಿದ್ದು, ಈ ವೇಳೆ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ.