ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ನೀರಿಗಿಳಿದ ಮೂವರು ಪ್ರವಾಸಿಗರು ನೀರು ಪಾಲಾಗಿದ್ದು, ಅವರಲ್ಲಿ ಓರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಗಿರೀಶ್ (26) ಮೃತ ದುರ್ದೈವಿ. ಸಂತೋಷ್(27) ಹಾಗು ಅನಂತ್(42) ಇಬ್ಬರನ್ನು ಈಶ್ವರ್ ಮಲ್ಪೆ ತಂಡ ಹಾಗು ಸ್ಥಳೀಯರ ನೆರವಿನೊಂದಿಗೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹಾಸನದ ಬೇಲೂರಿನ 20 ಜನರ ತಂಡ ಪ್ರವಾಸಕ್ಕೆಂದು ಹೊರಟಿದ್ದು, ಶೃಂಗೇರಿಗೆ ತೆರಳಿದ ಬಳಿಕ ಮಲ್ಪೆ ಬೀಚ್ ಗೆ ಆಗಮಿಸಿದ್ದರು. ಸಮುದ್ರದಲ್ಲಿ ನೀರಿನ ಸೆಳೆತ ತಿಳಿಯದೇ ಮೂವರು ನೀರು ಪಾಲಾಗಿದ್ದಾರೆ.
ತಕ್ಷಣ ಮಲ್ಪೆ ಬೀಚ್ ನಿರ್ವಹಣೆ ಸಮಿತಿ ಓಶಿಯನ್ ಅಡ್ವೆಂಚರ್ ನ ಸಿಬ್ಬಂದಿಗಳು ಹಾಗು ಸಮಾಜ ಸೇವಕ ಈಶ್ವರ್ ಮಲ್ಪೆ ತಂಡ ಕಾರ್ಯಪ್ರವೃತ್ತರಾಗಿ ಮೂವರನ್ನು ಮೇಲಕ್ಕೆತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ಓರ್ವ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಲ್ಪೆ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿದ್ದಾರೆ.