ಹೊಸದಿಗಂತ ವರದಿ, ಬೆಳಗಾವಿ:
ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ, ಇದು ಹೊಂದಾಣಿಕೆ ರಾಜಕಾರಣ ಎಂದು ಹರಿಹಾಯ್ದಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ ವಿಜಯೇಂದ್ರ ಅವರನ್ನು ನಾವು ಅಳೆದು ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ಹೊಂದಾಣಿಕೆ ಮಾಡಿಕೊಳ್ಳುವವರಿಗೆ ಕಾಲ ಇದು ಎಂದು ಲಿಂಬಾವಳಿ ಹೈಕಮಾಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಆಯ್ಕೆ ಆಗಿರುವ 66 ಜನರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆ ಶಾಸಕರಾಗಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆ ಆಗಿದ್ದಾರೆ ಎಂದು ಹೇಳಿ ಅಚ್ಛರಿ ಮಾಡಿಸಿದರು.
ಅಧ್ಯಕ್ಷರು, ಪ್ರತಿಪಕ್ಷ ನಾಯಕರಿಗೆ ವಿರೋಧ ಪಕ್ಷಗಳ ಜೊತೆಗೆ ಹೊಂದಾಣಿಕೆ ಇದೆ. ಅಂಥ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಬಂದಿದೆ. ಈ ಹೊಂದಾಣಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುತ್ತಿರಬಹುದು ಎಂದರು.
ತೀವ್ರ ಚರ್ಚೆಗೆ ಕಾರಣವಾಗಿರುವ ಜಾತಿ-ಗಣತಿ ಮೂಲ ಪ್ರತಿಯೇ ನಾಪತ್ತೆಯಾಗಿದ್ದರೆ ಪ್ರತಿ ಕಳ್ಳತನವಾಗಿದ್ದರೆ ಹುಡಕಲಿ. ಸಮೀಕ್ಷೆಯ ಹಾರ್ಡ್ ಕಾಪಿ ಕಂಪ್ಯೂಟರ್ನಲ್ಲಿರುತ್ತದೆ, ಅದನ್ನು ಕಳ್ಳತನ ಮಾಡಲು ಆಗುವುದಿಲ್ಲ. ಕಂಪ್ಯೂಟರ್ನಲ್ಲಿ ಮಾಹಿತಿಯ ಸಂಗ್ರಹ ಇದ್ದೆ ಇರುತ್ತದೆ ಎಂದ ಅವರು, ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಮಾಜಿಕವಾಗಿ ಯೋಚಿಸಬೇಕು ಎಂದು ಹೇಳಿದರು.