ಅರಣ್ಯ ಇಲಾಖೆ ಅನುಮೋದನೆಗಳ ಪಡೆಯಲು ಉನ್ನತ ಮಟ್ಟದ ಸಮಿತಿ ರಚನೆಗೆ ತೀರ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್

ರಾಜ್ಯದ ವಿವಿಧ ಯೋಜನೆಗಳಿಗೆ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮೋದನೆಗಳನ್ನು ಪಡೆಯಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಅರಣ್ಯ ಇಲಾಖೆ ಪರಿಶೀಲನಾ ಸಭೆ ತೀರ್ಮಾನಿಸಿತು.

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚನೆಯಾಗಲಿದೆ. ಸಮಿತಿಯು ನಿಗದಿತ ಸಮಯದೊಳಗೆ ಅನುಮೋದನೆಗಳನ್ನು ನೀಡುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಪರಿಸರ ನಷ್ಟಕ್ಕೆ ತಡೆ
ಕಳೆದ 5 ವರ್ಷಗಳಲ್ಲಿ ರಾಜ್ಯದ ಪರಿಸರದಲ್ಲಿ ಉಂಟಾಗಿರುವ ನಷ್ಟವನ್ನು ಮೌಲ್ಯಮಾಪನ ಮಾಡಿ ಐಸೆಕ್ ಸಂಸ್ಥೆ ಹೊರತಂದಿರುವ ವರದಿಯನ್ನು ಆಧರಿಸಿ ಪರಿಸರ ನಷ್ಟವನ್ನು ತಡೆಗಟ್ಟಲು ಹಾಗೂ ನಷ್ಟವನ್ನು ಸರಿದೂಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು. ಪರಿಸರ ಮತ್ತು ಆರ್ಥಿಕತೆ ಒಂದಕ್ಕೊಂದು ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಪರಿಸರ ಬಜೆಟ್ ರೂಪಿಸಲು ಮುಖ್ಯಮಂತ್ರಿಗಳು ತಿಳಿಸಿದರು.

ಕೃಷಿ ಅರಣ್ಯೀಕರಣ (ಆಗ್ರೋ ಫಾರೆಸ್ಟರಿ):
ಕೃಷಿ ಅರಣ್ಯೀಕರಣದಿಂದ ಹಸಿರು ಹೆಚ್ಚಾಗಿ, ಮಣ್ಣಿನ ಫಲವತ್ತೆಯೂ ಹೆಚ್ಚಾಗುತ್ತದೆ. ಮರ ಗಿಡಗಳನ್ನು ಬೆಳೆಸುವುದರಿಂದ ಕೃಷಿಯೇತರ ಚಟುವಟಿಕೆಗಳು ಹಾಗೂ ಪ್ರಾಣಿಗಳಿಗೂ ಆಹಾರ ಹಾಗೂ ಮೇವು ದೊರೆಯುತ್ತದೆ. ಜನರಲ್ಲಿ ಅರಣ್ಯೀಕರಣದ ಬಗ್ಗೆ ಜಾಗೃತಿ ಮೂಡಿ ವಿವಿಧ ಉದ್ದೇಶಗಳು ಈಡೇರಿದಂತಾಗುತ್ತದೆ. ಈ ಉದ್ದೇಶಕ್ಕಾಗಿ ಜಲಾನಯನ ಅಭಿವೃದ್ಧಿ ಪ್ರದೇಶಕ್ಕೆ ಸರಕಾರ ನೀಡುವ ಅನುದಾನವನ್ನು ಬಳಸಿ ಗುರಿಯನ್ನು ತಲುಪುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಮಾನವ ಹಾಗೂ ವನ್ಯ ಪ್ರಾಣಿಗಳ ಸಂಘರ್ಷ
ಮಾನವ ಹಾಗೂ ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು ರೈಲ್ವೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಂಡು ಬೆಳೆಹಾನಿ ಹಾಗೂ ಪ್ರಾಣಹಾನಿಯನ್ನು ತಪ್ಪಿಸಲು ಕ್ರಮಕೈಗೊಳ್ಳಲು ಸೂಚಿಸಿದರು.

ಅರಣ್ಯ ಸಚಿವ ಉಮೇಶ್ ಕತ್ತಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!